ಕಾರ್ಕಳ: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಮುಳಿಯಾಲ ಭೀಮ ಭಟ್ ಜನವರಿ 25ರ ಮಂಗಳವಾರ ಮುಂಜಾನೆ ಕಾಂತಾವರದಲ್ಲಿ ನಿಧನರಾದರು. ಕೆಲದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ 85ವರ್ಷ ವಯಸ್ಸಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಿಂದ ಯಕ್ಷಗಾನ ರಂಗ ಪ್ರವೇಶಿಸಿದ ಮುಳಿಯಾಲ ಭೀಮ ಭಟ್ ಅವರು ಕೋಡಂಗಿ, ಬಾಲಗೋಪಾಲ, ಮುಖ್ಯ ಸ್ರ್ತೀ ವೇಷ ಪಾತ್ರಗಳಿಗೆ ಜೀವತುಂಬಿದ್ದರು. ಏಳು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡಿ, ಬಳಿಕ ಕಟೀಲು ಮೇಳಕ್ಕೆ ಸೇರಿದ ಇವರನ್ನು ಕಲಾಭಿಮಾನಿಗಳು ದೇವಿ ಭಟ್ರು ಎಂದೇ ಕರೆಯುತ್ತಿದ್ದರು.
ಯಕ್ಷಗಾನ ರಂಗದಿಂದ ನಿವೃತ್ತರಾದ ಬಳಿಕ ಇವರು ಕಾಂತಾವರ ದೇವಸ್ಥಾನದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಿ ಭಟ್ ಎಂದೇ ಪ್ರಖ್ಯಾತಿ ಪಡೆದ ಅವರಿಗೆ ಪಾತಾಳ ಯಕ್ಷ ಕಲಾ ಮಂಗಳ ಪುರಸ್ಕಾರವನ್ನು ನೀಡಿ ಗೌರವಿಸಲಾಗಿತ್ತು. ಮೃತರು ಪತ್ನಿ, ಓರ್ವ ಮಗಳು ಹಾಗೂ ಅಭಿಮಾನಗಳನ್ನು ಅಗಲಿದ್ದಾರೆ.