ಕಟೀಲು: ರಾಜ್ಯ ಸರ್ಕಾರ ವಾರಂತ್ಯ ಕರ್ಫ್ಯೂ ರದ್ದುಗೊಳಿಸಿದ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ 35 ಜೋಡಿಗಳು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದೇವಸ್ಥಾನದ ಪ್ರಾಂಗಣದಲ್ಲಿ ಮದುವೆ ಮುಹೂರ್ತಗಳನ್ನು ಅಚ್ಚುಕಟ್ಟಾಗಿ ನಡೆಸಿ ಕೊಡುವ ಸಲುವಾಗಿ ನಾಲ್ವರು ಪುರೋಹಿತರು, ಎರಡು ಕೌಂಟರ್ ಮತ್ತು ನೋಂದಣಿಗೆ ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿತ್ತು.
ಬೆಳಿಗ್ಗೆ 8:45 ರಿಂದ ಆರಂಭವಾದ ವಿವಾಹ ಮುಹೂರ್ತಗಳು ಮಧ್ಯಾಹ್ನ 12:30ರವರೆಗೂ ಕೂಡ ನಡೆದಿತ್ತು. ಇನ್ನು, ದೇವಳದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚನ ಫಲಕಗಳನ್ನು ಹಾಕಿದ್ದರು. ಅಲ್ಲದೇ ಈ ಕುರಿತು ಧ್ವನಿವರ್ಧಕದ ಮೂಲಕವೂ ಕೂಡ ಪ್ರಕಟ ಮಾಡುವ ಮುಖಾಂತರ ನೆರೆದಿದ್ದವರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಸುಮಾರು 6 ಸಾವಿರ ಮಂದಿ ಅನ್ನಪ್ರಸಾದವನ್ನು ಸ್ವೀಕಾರ ಮಾಡಿದರು.