Sunday, June 8, 2025

379 ವರ್ಗಗಳ ಕಾರ್ಮಿಕರು ಇ- ಶ್ರಮ್ ಯೋಜನೆಗೆ ನೊಂದಣಿ ಮಾಡಲು ಅರ್ಹ

ಉಡುಪಿ: ಇಂದು ಕಾರ್ಮಿಕ ಸಮಗ್ರ ರಾಷ್ಟ್ರೀಯ ದತ್ತಾಂಶ ಇ ಶ್ರಮ್ ಯೋಜನೆಯ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ನಿವಾರೋಣಾಪಾಯ ಸೇರಿದಂತೆ ಸಾಮಾಜಿಕ ಭದ್ರತೆಗಳನ್ನು ರೂಪಿಸಲು ಇ ಶ್ರಮ್ ಯೋಜನೆ ನೊಂದಣಿ ನಡೆಯುತ್ತಿದೆ. ವಲಸೆ ಕಾರ್ಮಿಕರು ಸೇರಿ ಅಸಂಘಟಿತ ಕಾರ್ಮಿಕರುಗಳು ಕೂಡ ತಪ್ಪದೇ ನೊಂದಣಿ ಮಾಡಿಸಿಕೊಳ್ಳಬೇಕು. ಅಸಂಘಟಿತ ಕಾರ್ಮಿಕರು ನೊಂದಣಿ ಮಾಡಿಕೊಳ್ಳುವುದರಿಂದ ಶೀಘ್ರದಲ್ಲಿಯೇ ಸರ್ಕಾರದ ಹಲವಾರು ಯೋಜನೆಗಳ ಲಾಭ ಸಿಗಲಿದೆ. 16-59 ವಯಸ್ಸಿನವರು ಭವಿಷ್ಯ ನಿಧಿ ಅಥವಾ ಇಎಸ್‌ಐ ಫಲಾನುಭವಿಗಳಲ್ಲದವರು ಉಚಿತವಾಗಿ ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಒಟ್ಟು 379 ವರ್ಗಗಳ ಕಾರ್ಮಿಕರು ಇ – ಶ್ರಮ್ ನಲ್ಲಿ ನೊಂದಾಯಿಸಲು ಅರ್ಹರಾಗಿದ್ದಾರೆ.

“ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್” ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆಗೆ ಮಾಸಿಕ 15000 ಒಳಗಿನ ಆದಾಯ ಹೊಂದಿದವರು, 18-40 ವಯಸ್ಸಿನವರು ಈ ಯೋಜನೆಯಡಿ ನೊಂದಣೆ ಮಾಡಿಕೊಳ್ಳಬಹುದಾಗಿದೆ. ಕಾರ್ಮಿಕರು ಪ್ರತಿ ತಿಂಗಳು 55 ರೂ ವಂತಿಗೆ ಪಾವತಿ ಮಾಡಿದರೆ 60 ವರ್ಷದ ನಂತರ ವಾರ್ಷಿಕ 36000 ರೂ ಪಿಂಚಣಿ ಪಡೆಯಬಹುದಾಗಿದೆ.

ವ್ಯಾಪಾರಿ, ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ಮಾಸಿಕ 3000 ಪಿಂಚಣಿ ಸೌಲಭ್ಯ ಒಗದಿಸುವ “ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿ ರಾಷ್ಟ್ರೀಯ ಪಿಂಚಣಿ “ ವಂತಿಗೆ ಆಧಾರಿತ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಲಾಭವನ್ನು 18-40 ವರ್ಷದೊಳಗಿನ ವಾರ್ಷಿಕ ವಹಿವಾಟು 1.5 ಕೋಟಿ ಒಳಗಿರುವ ಆದಾಯ ತೆರಿಗೆ ಪಾವತಿ ಮಾಡದವರು ಪಡೆಯಬಹುದಾಗಿದೆ. ಈ ಎರಡೂ ಪಿಂಚಣಿ ಯೋಜನೆಗಳಿಗೆ ನೋಂದಣಿ ಮಾಡುವವರು ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಹಾಗೂ ನಾಮನಿರ್ದೇಶಿತರ ವಿವರಗಳೊಂದಿಗೆ ಮಾಸಿಕ ವಂತಿಗೆ ಪಾವತಿಯೊಂದಿಗೆ ನೊಂದಣಿ ಮಾಡಬಹುದಾಗಿದೆ.

ಜಿಲ್ಲೆಯಲ್ಲಿ ಕಳೆದ 2 ತಿಂಗಳಿಂದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸಮೀಕ್ಷೆ ನಡೆಸಲಾಗುತ್ತಿದೆ. ಈ ಬಾಲ ಬಾಲ ಕಾರ್ಮಿಕರಿಗೆ ಹಾಗೂ ಕಿಶೋರ ಕಾರ್ಮಿಕರಿಗೆ ಪುರ್ನವಸತಿ, ಶಾಲೆಗೆ ಹೋಗುವಂತೆ ಕ್ರಮವಹಿಸಬೇಕು. ಹಾಗೂ ಇವರುಗಳ ಮಾಲೀಕರುಗಳಿಗೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಕಾರ್ಮಿಕ ಅಧಿಕಾರಿ ಕುಮಾರ್, ನಗರಾಭಿವೃಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಹಾಗೂ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles