ಹಾವೇರಿ: ವಸೀಮ್ ಮುಲ್ಲಾ ಎಂಬ ವ್ಯಕ್ತಿಯು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದು, ಸಾಲ ನೀಡಲು ನಿರಾಕರಿಸಿದ್ದಕ್ಕಾಗಿ ಬ್ಯಾಂಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆಯು ಶನಿವಾರ ತಡರಾತ್ರಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ನಡೆದಿದೆ.
33 ವರ್ಷದ ವಸೀಮ್ ಮುಲ್ಲಾ ವ್ಯಕ್ತಿಯು ಆರೋಪಿಯಾಗಿದ್ದು, ಈತ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ನಿವಾಸಿ. ಈತ ಸಾಲಕ್ಕಾಗಿ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಬ್ಯಾಂಕ್ ಮ್ಯಾನೇಜರ್ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡು ವಸೀಮ್ ಬ್ಯಾಂಕ್ ನ ಕಿಟಕಿ ಬಾಗಿಲುಗಳನ್ನು ತೆಗೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆ ತಿಳಿದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳವು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯಲ್ಲಿ ಬ್ಯಾಂಕ್ ನ ಯಾವುದೇ ನಗದು ಬೆಂಕಿಗಾಹುತಿಯಾಗಿಲ್ಲ. ಬದಲಾಗಿ ಒಟ್ಟು ರೂ.12 ಲಕ್ಷ ಮೌಲ್ಯದ ಕ್ಯಾಶ್ ಕೌಂಟರ್, ಕ್ಯಾಬಿನ್, ಸಿಸಿಟಿವಿ, ಐದು ಕಂಪ್ಯೂಟರ್ಗಳು, ಪಾಸ್ಬುಕ್ ಪ್ರಿಂಟರ್, ಸ್ಕ್ಯಾನರ್, ಪ್ರಿಂಟರ್, ನಗದು ಎಣಿಸುವ ಯಂತ್ರ, ಫ್ಯಾನ್, ಲೈಟ್ಗಳು, ಕೆಲವು ದಾಖಲೆಗಳು ಮತ್ತು ಪೀಠೋಪಕರಣಗಳು ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.