ರಾಜ್ಯ ಸರಕಾರವು ಮೀನುಗಾರಿಕೆ ಹಾಗೂ ಮೀನು ಸಾಕಾಣಿಕೆಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಹಲವಾರು ನೂತನ ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರಧಾನಮಂತ್ರಿ ಮತ್ಸಸಂಪದ ಯೋಜನೆಯ ಮೂಲಕ ಕೃಷಿತೋಟಗಳಲ್ಲಿ ಮೀನು ಸಾಕಾಣಿಕೆಯನ್ನು ಹೆಚ್ಚಿಸುವ ಸಲುವಾಗಿ ಮೀನು ಸಾಕಾಣಿಕೆ ಮಾಡುವವರಿಗೆ ಸಬ್ಸಿಡಿ, ರಾಜ್ಯದಲ್ಲೇ ಮೀನು ತಳಿಗಳ ಉತ್ಪಾದನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮೀನಿಗೆ ಭಾರೀ ಬೇಡಿಕೆ ಬರುತ್ತಿದೆ. ಇದರಿಂದಾಗಿ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ. ಆದ್ದರಿಂದ ಸರಕಾರವು ಸಿಹಿ ನೀರಿನ ಮೀನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಲು ತೀರ್ಮಾನ ಮಾಡಿದೆ. ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸಸಂಪದ ಯೋಜನೆಯ ಮೂಲಕ ಮೀನುಗಾರಿಕಾ ಇಲಾಖೆಗೆ ಅನುದಾನವನ್ನು ನೀಡಲಾಗುತ್ತಿದೆ.
ಈ ಹಿಂದೆ ಮೀನಿನ ಮರಿಗಳನ್ನು ತಮಿಳುನಾಡು, ಆಂದ್ರಪ್ರದೇಶ ಹಾಗು ಗುಜರಾತ್ ರಾಜ್ಯಗಳಿಂದ ತರಿಸಲಾಗುತ್ತಿತ್ತು. ಆದರೆ ಇದೀಗ ಮೀನಿನ ಮರಿಗಳ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲೇ ಆರಂಭಿಸಲು ರಾಜ್ಯ ಸರಕಾರ ನಿರ್ಧಾರ ಮಾಡಿದೆ. ರಾಜ್ಯದಲ್ಲಿ ಮೀನು ಸಾಕಾಣಿಕೆಯ ಪ್ರಮಾಣವನ್ನು ವೃದ್ಧಿಸುವ ಸಲುವಾಗಿ ಕೃಷಿತೋಟಗಳಲ್ಲಿ ಮೀನು ಸಾಕಾಣಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಕ್ಕೆ ಶೇಕಡಾ 60 ಸಬ್ಸಿಡಿಯನ್ನು ನೀಡಲಾಗುತ್ತಿದೆ.
ರಾಜ್ಯದಲ್ಲಿ ಉತ್ಪಾದನೆ ಮಾಡುವ ಸಿಹಿ ಮತ್ತು ಉಪ್ಪು ನೀರಿನ ಮೀನುಗಳನ್ನು ಶೀಘ್ರವಾಗಿ ಮಾರುಕಟ್ಟೆಗೆ ಸಾಗಿಸುವ ಸಲುವಾಗಿ 8 ಶಿಥಲೀಕರಣ ವ್ಯವಸ್ಥೆಯಿರುವ ವಾಹನಗಳು ದ.ಕ ಜಿಲ್ಲೆಯಲ್ಲಿ ಸಿದ್ಧವಾಗಿದೆ. ಈ ವಾಹನಗಳನ್ನು ಸೋಲಾರ್ ಹಾಗೂ ಎಲೆಕ್ಟ್ರಿಕ್ ಮೂಲಕ ಓಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮೀನುಗಾರಿಕೆ, ಬಂದರು ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.