ಕಾಸರಗೋಡು: ಪರೋಪಕಾರಿಯಾಗಿದ್ದ ಸಮಾಜ ಕಾರ್ಯಕರ್ತ ಸಾಯಿರಾಮ್ ಗೋಪಾಲ ಕೃಷ್ಣ ಭಟ್ ಜನವರಿ 22 ಶನಿವಾರದಂದು ಕಿಳಿಂಗಾರುವಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಕೊಡುಗೈದಾನಿಯೆಂದೇ ಪ್ರಖ್ಯಾತಿಯನ್ನು ಪಡೆದಿದ್ದ ಇವರಿಗೆ 85 ವರ್ಷ ವಯಸ್ಸಾಗಿತ್ತು.
ಸಾಯಿರಾಮ್ ಗೋಪಾಲ ಕೃಷ್ಣ ಭಟ್ರವರು ಹಲವಾರು ಬಡಕುಟುಂಬಗಳಿಗೆ ಮನೆಯನ್ನು ನಿರ್ಮಿಸಿ ಕೊಟ್ಟಿದ್ದರು. ಅಲ್ಲದೇ ಸ್ವ ಉದ್ಯೋಗ ಮಾಡುವವರಿಗೂ ಕೂಡ ಉತ್ತಮ ರೀತಿಯ ಸಹಾಯವನ್ನು ಮಾಡುತ್ತಿದ್ದ ಇವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಸತ್ಯ ಸಾಯಿ ಬಾಬಾರ ಅಪ್ರತಿಮ ಭಕ್ತರಾಗಿದ್ದ ಕಾರಣ ಇವರು ಸಾಯಿರಾಂ ಭಟ್ ಎಂದೇ ಖ್ಯಾತಿಯನ್ನು ಪಡೆದಿದ್ದರು. ಕಿಳಿಂಗಾರಿನಲ್ಲಿ ಸಾಯಿ ಮಂದಿರವನ್ನು ಸ್ಥಾಪಿಸಿದ್ದ ಸಾಯಿರಾಂ ಭಟ್ರವರು ಸುಮಾರು 25 ವರ್ಷಗಳ ಹಿಂದೆಯೇ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆಯನ್ನು ನೀಡಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯರು ಮತ್ತು ಅಪಾರ ಅಭಿಮಾನಿಗಳನ್ನು ಹಾಗೂ ಬಂಧು ಮಿತ್ರರನ್ನ ಅಗಲಿದ್ದಾರೆ.