Sunday, June 8, 2025

ಆಳುಪ ದೊರೆ 1ನೇ ಕುಲಶೇಖರನ 12 ನೇ ಶತಮಾನದ ಶಾಸನ ಪತ್ತೆ

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯ ಬನ್ನಾಡಿ ಗ್ರಾಮದ ಸಂಜೀವ ಶೆಟ್ಟಿಯವರ ಕೃಷಿ ಭೂಮಿಯಲ್ಲಿ 12 ನೇ ಶತಮಾನದ ಶಾಸನವೊಂದು ದೊರಕಿದೆ. ಇದನ್ನು ಬಿ.ಕುಶ ಆಚಾರ್ಯ ಅವರು ಪತ್ತೆ ಮಾಡಿದ್ದಾರೆ. ಈ ಶಾಸನದಲ್ಲಿರುವ ಅಂಶವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ.

ಈ ಶಾಸನವನ್ನು ಗ್ರಾನೈಟ್ ಶಿಲೆಯಲ್ಲಿ ಕೊರೆಯಲಾಗಿದ್ದು, 12 ನೇ ಶತಮಾನದ ಕನ್ನಡ ಲಿಪಿ ಹಾಗೂ ಭಾಷೆಯನ್ನು ಹೊಂದಿದೆ. 18 ಸಾಲುಗಳನ್ನು ಹೊಂದಿದ ಈ ಶಾಸನವು 5 ಅಡಿ ಎತ್ತರ 2 ಅಡಿ ಅಗಲವಿದೆ. ಶಾಸನದ ಮೇಲ್ಭಾಗದಲ್ಲಿ ಶಿವನ ಲಿಂಗಕ್ಕೆ ಕೈಮುಗಿದು ನಿಂತಿರುವ ವ್ಯಕ್ತಿ ಮತ್ತು ಎರಡು ಹಸುಗಳ ಉಬ್ಬು ಕೆತ್ತನೆ ಇದೆ. ಶಾಸನದಲ್ಲಿರುವ ಕೆಲವು ಸಾಲುಗಳಿಂದ ಈ ಶಾಸನವು ಆಳುಪ ದೊರೆ ಒಂದನೇ ಕುಲಶೇಖರನ ಕಾಲಕ್ಕೆ ಸೇರಿದ್ದು, ಕುಲಶೇಖರ ದೊರೆಯು ಮಂಗಳಾಪುರದ (ಮಂಗಳೂರು) ಅರಮನೆಯಲ್ಲಿ ವಾಸವಿದ್ದ ಸಂದರ್ಭದಲ್ಲಿ ಬನಹಾಡಿಯ ಬಸಪ್ಪನು ಪ್ರತಿನಿತ್ಯ ದೇವರ ನೈವೇದ್ಯಕ್ಕೆ ನೀಡಿದ ಭೂದಾನದ ವಿವರವು ಶಾಸನದಲ್ಲಿದೆ.

ಶಾಸನದಲ್ಲಿ ಶಕವರ್ಷ 1112 ನೇ ಸಾಧಾರಣ ಸಂವತ್ಸರದ ಜೇಷ್ಠ ಮಾಸ 11 ಗುರುವಾರ ಎಂಬ ಕಾಲಮಾನದ ಉಲ್ಲೇಖವಿದೆ. ಈ ಕಾಲಮಾನವು ಕ್ರಿ.ಶ.1190 ಕ್ಕೆ ಹೋಲಿಕೆಯಾಗುತ್ತದೆ. ಹಾಗೂ ಶಾಸನದಲ್ಲಿ ಉಲ್ಲೇಖವಾದ ಬನಹಾಡಿ ಎಂಬ ಪದವು ಪ್ರಸ್ತುತ ಬನ್ನಾಡಿಯ ಪ್ರಾಚೀನ ಹೆಸರಾಗಿರಬಹುದೆಂದು ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಅವರು ಅಭಿಪ್ರಾಯ ಪಟ್ಟಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles