ಬೆಂಗಳೂರು: ಈ ಬಾರಿ ದೆಹಲಿಯ ರಾಜ್ ಪಥದಲ್ಲಿ ನಡೆಯಲಿರುವ 73 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸುವ ಕರ್ನಾಟಕದ ಸ್ತಬ್ಧಚಿತ್ರವು ಸಾಂಪ್ರದಾಯಿಕ ಕರಕುಶಲ ಹಾಗೂ ಕಲಾ ವೈವಿಧ್ಯತೆಯನ್ನು ಪ್ರದರ್ಶನ ಮಾಡಲಿದೆ.
ರಾಜ್ಯದ ಸ್ತಬ್ಧಚಿತ್ರವು ‘ಕರ್ನಾಟಕ: ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯಾಧಾರಿತವಾಗಿದೆ. ಹಾಗೂ ಇದು ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರವಾಗಿದೆ. ಈ ವರ್ಷ ಪರೇಡ್ ನಲ್ಲಿ 12 ರಾಜ್ಯಗಳು ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡುತ್ತಿದ್ದು, ಇದರಲ್ಲಿ ಕರ್ನಾಟಕವೂ ಒಂದಾಗಿದೆ.
ಕರ್ನಾಟಕವು 13 ನೇ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡುತ್ತಿದೆ. ಸ್ತಬ್ಧಚಿತ್ರವು 16 ‘ಜಿಯೊಗ್ರಾಫಿಕಲ್ ಇಂಡಿಕೇಷನ್’ (ಜಿಐ) ಟ್ಯಾಗ್ ಹೊಂದಿರುವ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಹೊಂದಿದೆ. ಈ ಸ್ತಬ್ಧಚಿತ್ರವು ಕರಕುಶಲ ಉತ್ಪನ್ನಗಳ ಪರಂಪರೆಯನ್ನು ಮುಂದುವರಿಸಲು ಹಗಲಿರುಳು ಶ್ರಮಿಸಿದ ರಾಜ್ಯದ ವಿವಿಧ ಭಾಗಗಳಲ್ಲಿನ 50,000 ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ನೀಡುವ ಗೌರವ ಇದಾಗಿದೆ’ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.