ಕೊರೊನಾ ಮೂರನೇ ಅಲೆಯು ಜಗತ್ತಿನಾದ್ಯಂತ ಭಾರೀ ವೇಗದಲ್ಲಿ ಅಪ್ಪಳಿಸುತ್ತಿದೆ. ಭಾರತದಲ್ಲೂ ಇದು ವೇಗವಾಗಿ ಹರಡುತ್ತಿದೆ. ಈ ಹಿನ್ನಲೆ ರಾಜ್ಯಾದ್ಯಂತ ಸರ್ಕಾರಿ ಶಾಲಾ ಶಿಕ್ಷಕರನ್ನು ಕೋವಿಡ್ ಕಾರ್ಯಗಳಿಗೆ ಸರ್ಕಾರ ನಿಯೋಜನೆ ಮಾಡಿದೆ. ಆದರೆ ಇದರ ವಿರುದ್ಧ ತೀವ್ರ ವಿರೋಧ ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ರಾಜ್ಯ ಸರ್ಕಾರ ಕೊರೊನಾ ವಾರಿಯರ್ಸ್ಗಳಾಗಿ ಶಿಕ್ಷಕರನ್ನು ಪರಿಗಣಿಸದೆ ಇರುವುದಾಗಿದೆ.
ಹೌದು ಕೋವಿಡ್ ಕಾರ್ಯಕ್ಕೆಂದು ನಿಯೋಜಿಸಿರುವ ಶಾಲಾ ಶಿಕ್ಷಕರಿಗೆ ಸರ್ಕಾರ ಕೋವಿಡ್ ವಾರಿಯರ್ ಸ್ಥಾನಮಾನ ನೀಡಿಲ್ಲ. ಕಳೆದ ಬಾರಿ ಕೋವಿಡ್ ಕಾರ್ಯದ ವೇಳೆ ಸೋಂಕಿಗೆ ಸಿಲುಕಿ ಮೃತಪಟ್ಟ ಶಿಕ್ಷಕರಿಗೆ ಇದುವರೆಗೆ ಯಾವುದೇ ರೀತಿಯ ವಿಮೆಯನ್ನು ಪಾವತಿಸಲಿಲ್ಲ. ಸರ್ಕಾರದ ಈ ಕ್ರಮವನ್ನು ಶಿಕ್ಷಕರೆಲ್ಲರೂ ಒಂದೇ ಸ್ವರದಲ್ಲಿ ವಿರೋಧಿಸುತ್ತಿದ್ದಾರೆ. ಇದಲ್ಲದೆ ಹಲವಾರು ಸಮಸ್ಯೆಗಳನ್ನು ಶಿಕ್ಷಕರು ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಯಾವುದೇ ಕಾರ್ಯಕ್ಕೂ ಮೊದಲು ಶಿಕ್ಷಕರನ್ನೇ ಗುರಿ ಇಡಲಾಗುತ್ತಿದೆ ಎನ್ನುವ ದೂರುಗಳೂ ಕೇಳಿಬರುತ್ತಿವೆ. ಈ ಹಿಂದಿನ ಎರಡೂ ಅಲೆಗಳಲ್ಲೂ ಕೋವಿಡ್ ಕಾರ್ಯಭಾರವನ್ನು ಶಿಕ್ಷಕರ ಮೇಲೆ ಹೊರಿಸಲಾಗಿತ್ತು.ಕಳೆದ ಬಾರಿ ತಮ್ಮ ಕರ್ತವ್ಯದ ವೇಳೆ ಕೋವಿಡ್ ಸೋಂಕಿಗೆ ಒಳಪಟ್ಟು ಸುಮಾರು 30 ಶಿಕ್ಷಕರು ಮೃತಪಟ್ಟಿದ್ದರು. ಆದರೆ ಇದುವರೆಗೆ ಇವರಿಗೆ ವಿಮಾ ಮೊತ್ತ ಪಾವತಿಸಿಲ್ಲ. ಇದರಿಂದ ಶಿಕ್ಷಕರು ತೀವ್ರ ಅಸಮಧಾನಕ್ಕೊಳಗಾಗಿದ್ದಾರೆ. ಕೊರೊನಾ ಕಾರ್ಯಗಳಿಗೆ ನಿಯೋಜನೆಗೊಂಡ ಉಳಿದ ಸಿಬ್ಭಂದಿಗಳನ್ನು ಕೊರೊನಾ ವಾರಿಯರ್ ಗಳಾಗಿ ಪರಿಗಣಿಸಿರುವ ಸರ್ಕಾರ ಶಿಕ್ಷಕರನ್ನು ಕಡೆಗಣಿಸಿದೆ.
ಒಂದು ವೇಳೆ ಕೋವಿಡ್ ಕರ್ತವ್ಯದ ವೇಳೆ ಸಿಬ್ಬಂದಿಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ಸುಮಾರು 30 ಲಕ್ಷ ರೂ. ಗಳಷ್ಟು ವಿಮಾ ಸೌಲಭ್ಯವನ್ನು ಪಾವತಿಸಲಾಗುತ್ತದೆ. ಆದರೆ ಈ ಸೌಲಭ್ಯ ಶಿಕ್ಷಕರಿಗೆ ಅನ್ವಯವಿಲ್ಲವೇ ಎನ್ನುವುದು ಅವರ ಪ್ರಶ್ನೆ. ನಮ್ಮ ಸೇವೆ ಬೇಕು ಆದರೆ ನಮಗೆ ಸೌಲಭ್ಯಗಳಿಲ್ಲವೆ ಎಂದು ಶಿಕ್ಷಕರು ಪ್ರಶ್ನಿಸುವುದರಲ್ಲಿ ತಪ್ಪೇನಲ್ಲ.
ಇನ್ನು ಕೋವಿಡ್ ಕಾರ್ಯಕ್ಕೆ ಶಿಕ್ಷಕರನ್ನು ನೇಮಿಸಿದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಡಚಣೆಯಾಗುತ್ತದೆ ಎಂದು ಶಿಕ್ಷಕರು ದೂರುತ್ತಿದ್ದಾರೆ. ಯಾಕೆಂದರೆ, ಸುಮಾರು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಶಾಲೆಗಳು ಕಳೆದ ಮೂರು ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರಾರಂಭಗೊಂಡಿದೆ. ಕೊರೊನಾ ಜಾಸ್ತಿಯಿರುವ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಶಾಲೆಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಈ ಮಧ್ಯೆ ಶಿಕ್ಷಕರನ್ನು ಕೊರೊನಾ ವಾರಿಯರ್ ಗಳನ್ನಾಗಿ ನೇಮಿಸಿದರೆ ಮಕ್ಕಳ ಶೈಕ್ಷಣಿಕ ಕಾರ್ಯಗಳಿ ಖಂಡಿತ ಅಡ್ಡಿಯಾಗುತ್ತದೆ. ಶಿಕ್ಷಕರು ಮಕ್ಕಳ ಪಾಠದ ಕಡೆ ಗಮನಹರಿಸಬೇಕೋ ಅಥವಾ ಕೋವಿಡ್ ಸೋಂಕಿತರ ಪತ್ತೆಗಾಗಿ ಹೊರಾಡಬೇಕೋ ಎನ್ನುವುದು ಶಿಕ್ಷಕರ ಪ್ರಶ್ನೆ. ಆನ್ ಲೈನ್ ತರಗತಿಗಳು ನಡೆಯುತ್ತಿದ್ದ ಹಿನ್ನಲೆ ಪಾಠಗಳನ್ನು ಪುನರಾವರ್ತಿಸಬೇಕಾಗುತ್ತದೆ. ಇನ್ನು ಪರೀಕ್ಷೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ತೊಂದರೆಯುಂಟಾಗಬಾರದು ಎಂದೂ ಹೇಳಲಾಗುತ್ತಿದೆ.
ಸರ್ಕಾರ ಹೊಸ ಶಿಕ್ಷಕರ ನೇಮಕಾತಿಗಳನ್ನು ಕೂಡಾ ಮುಂದೂಡುತ್ತಿದೆ. ಇದ್ದ ಎಲ್ಲಾ ಕೆಲಸಗಳ ಹೊರೆಯನ್ನು ಇರುವ ಕೆಲವೇ ಶಿಕ್ಷಕರ ಮೇಲೆ ಹಾಕಲಾಗುತ್ತಿದೆ. ಹಾಗಾಗಿ ಇವೆಲ್ಲಾ ಕಾರಣಗಳಿಂದ ಕೋವಿಡ್ ಕಾರ್ಯಕ್ಕೆ ಶಿಕ್ಷಕರ ನಿಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
-ಮೈಮುನಾ ಅಸ್ಲಾಂ