ಪಡುಬಿದ್ರಿ: ತರಕಾರಿ ಉದ್ಯಮಿ ಮನ್ಸೂರ್ ಅವರು ಸೋಮವಾರ ರಾತ್ರಿ ಕಂಚಿನಡ್ಕ ರುದ್ರಭೂಮಿ ಮಾರ್ಗದಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಆಟೋ ಹಾಗೂ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳ ಗುಂಪೊಂದು ಪಿಸ್ತೂಲು ಹಾಗೂ ತಲವಾರು ತೋರಿಸಿ ಹಲ್ಲೆಗೈದು 3 ಲಕ್ಷ ನಗದು ಹಾಗೂ ಚಿನ್ನದ ಉಂಗುರವನ್ನು ದರೋಡೆ ಮಾಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಕಂಚಿನಡ್ಕ ನಿವಾಸಿಗಳಾದ ಹಸನ್ ಬಾವಾ, ಫಿಯೋಝ್ , ರೆಹಮಾನ್, ನಝೀರ್, ರಹೀಮ್, ಯೂಸುಫ್, ಕಾಟಿಪಳ್ಳದ ಅಜೀದ್ ಸೇರಿ ಎಂಟು ಜನ ಆರೋಪಿಗಳು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮನ್ಸೂರ್ ಅವರು ತಿಳಿಸಿದ್ದಾರೆ.
ಹಲ್ಲೆಯಲ್ಲಿ ಗಾಯಗೊಂಡ ಮನ್ಸೂರ್ ಅವರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಅವರಿಗೆ ಜೀವಬೆದರಿಕೆ ಒಡ್ಡಿದ ಆರೋಪದಲ್ಲಿ ಮನ್ಸೂರ್ ಅವರನ್ನು ಬಂಧಿಸಲಾಗಿತ್ತು. ಮನ್ಸೂರ್ ಅವರು ವಾದ ಹಿಂದಷ್ಟೆ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.