ಬೆಂಗಳೂರು: ಹಿರಿಯ ನಟ ಅಶೋಕ್ ರಾವ್ ಅವರು ಅಶೋಕ್ ರಾವ್ ಅವರು ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದರು. ಅವರು ಕೆಲ ತಿಂಗಳಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ 12.30 ಕ್ಕೆ ವಿದ್ಯಾರಣ್ಯಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
ಅಶೋಕ್ ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳ ನಟ, ಪೋಷಕ ನಟನಾಗಿ ನಟಿಸಿದ್ದಾರೆ. ಡಾ.ರಾಜ್ ಕುಮಾರ್, ಶಂಕರ್ ನಾಗ್ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಅಶೋಕ್ ರಾವ್ ಅವರು ಡಾ.ರಾಜ್ ಕುಮಾರ್ ನಟನೆಯ ‘ಪರಶುರಾಮ’ ಚಿತ್ರದ ಖಳನಾಯಕನ ಪಾತ್ರದಲ್ಲಿ ಹಾಗೂ ನಾಗತಿಹಳ್ಳಿ ಚಂದ್ರಶೇಕರ್ ನಿರ್ದೇಶನದ ‘ಬಾ ನಲ್ಲೆ ಮಧು ಚಂದ್ರಕೆ’ ಚಿತ್ರದ ತನಿಖಾಧಿಕಾರಿ ಪಾತ್ರದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.
ಅಶೋಕ್ ರಾವ್ ಅವರು ಜನಿಸಿದ್ದು ಕಾಸರಗೋಡಿನಲ್ಲಿ. ಬಳಿಕ ತಮಿಳುನಾಡಿನ ಸೇಲಂನ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದರು. ಶಾಲಾ ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅಶೋಕ್ ರಾವ್ ಅವರದ್ದು ಕಂಚಿನ ಕಂಠ ಹೊಂದಿದ್ದ ಕಾರಣ ಹಲವಾರು ಪಾತ್ರಗಳು ಇವರನ್ನು ಅರಸಿ ಬಂದವು. ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಹಲವು ಇಂಗ್ಲೀಷ್ ನಾಟಕಗಳಲ್ಲಿ ನಟಿಸಿದರು. ಈ ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅಶೋಕ್ ಅವರಿಗೆ ಸಿಕ್ಕಿತು.