ಬೆಂಗಳೂರು: ಸಾಮಾನ್ಯವಾಗಿ ಕೆಲ ಕಳ್ಳರು ಕಳ್ಳತನ ಮಾಡಿದ ನಂತರ ದೇವರಿಗೆ ಕೈಮುಗಿಯುವುದು, ಪೂಜೆ ಮಾಡಿಸುವುದು ಅಥವಾ ತಪ್ಪು ಕಾಣಿಕೆ ಎತ್ತಿಡುವುದನ್ನು ಮಾಡುತ್ತಾರೆ. ಆದರೆ ಕಳ್ಳತನ ಮಾಡಲು ಹೋದಾಗಲೇ ದೇವರಿಗೆ ಕೈಮುಗಿದು ಕಳ್ಳತನ ಮಾಡದೇ ತಿರುಗಿ ಬಂದಿರುವ ಘಟನೆ ಬೆಂಗಳೂರಿನ ಹೊರ ವಲಯದ ತಾವರಕೆರೆಯ ಆರ್ಬಿಐ ಬಡಾವಣೆಯಲ್ಲಿ ನಡೆದಿದೆ.
ಆರ್ಬಿಐ ಬಡಾವಣೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ತಡರಾತ್ರಿ 2 ಗಂಟೆಗೆ ಕಳ್ಳನೊಬ್ಬ ಬಂದಿದ್ದು, ದೇಗುಲದ ಬಾಗಿಲನ್ನು ರಾಡ್ ನಿಂದ ಹೊಡೆದು ಮುರಿದಿದ್ದಾನೆ. ದೇಗುಲದ ಒಳಗೆ ಬಂದ ಕಳ್ಳ ದೇವರ ಮೇಲಿರುವ ಚಿನ್ನದ ಆಭರಣಗಳನ್ನು ಹಾಗೂ ಕಾಣಿಕೆ ಹುಂಡಿಯಲ್ಲಿರುವ ಹಣವನ್ನು ಕಳ್ಳತನ ಮಾಡಬೇಕು ಎಂದುಕೊಳ್ಳುತ್ತಾನೆ.
ಕಳ್ಳತನ ಮಾಡಬೇಕೆಂದುಕೊಂಡ ಕಳ್ಳ ಅದೇನಾಯಿತೋ ಏನೋ ಕಳ್ಳತನ ಮಾಡುವ ಬದಲು ಒಂದೆರಡು ನಿಮಿಷ ಹಾಗೇ ನಿಂತು ಬಿಡುತ್ತಾನೆ. ಕಳ್ಳತನ ಮಾಡಲು ಬಂದ ಕಳ್ಳ ತಾನು ಬಂದ ಉದ್ದೇಶವನ್ನು ಮರೆತು ದೇವರ ವಿಗ್ರಹ ನೋಡಿ ಮೂಕನಂತೆ ಕೈ ಮುಗಿದು ನಿಂತುಬಿಡುತ್ತಾನೆ. ಹಾಗೇ ಕಳ್ಳತನ ಮಾಡದೇ ಖಾಲಿ ಕೈಯಲ್ಲಿ ವಾಪಾಸ್ಸಾಗುತ್ತಾನೆ. ಕಳ್ಳನ ಚಲನವಲನಗಳೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ