ಕಾರ್ಕಳ: ತಾಲೂಕಿನ ನೀರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಅವರು ಬೆಳಿಗ್ಗೆ ಕರ್ತವ್ಯಕ್ಕೆ ಬರುತ್ತಿದ್ದ ವೇಳೆ ವ್ಯಕ್ತಿಯೋರ್ವ ಕಸವನ್ನು ಎಸೆಯುತ್ತಿರುವುದನ್ನು ಗಮನಿಸಿ ಆತನಿಗೆ ದಂಡ ವಿಧಿಸಿ ಅದೇ ವ್ಯಕ್ತಿಯಿಂದ ಕಸವನ್ನು ತೆಗೆಸಿದ ಘಟನೆ ನಡೆದಿದೆ.
ಅಧಿಕಾರಿ ಅಂಕಿತಾ ನಾಯಕ್ ಬೆಳಿಗ್ಗೆ ಕರ್ತವ್ಯಕ್ಕೆ ಬರುತ್ತಿದ್ದ ಸಮಯದಲ್ಲಿ ಕಾರ್ಕಳ ತಾಲೂಕು ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ಸುರಕ್ಷಿತ ಅರಣ್ಯ ಬಳಿಯ ಉಡುಪಿ – ಕಾರ್ಕಳ ಹೆದ್ದಾರಿಯಲ್ಲಿ ಕಾರ್ಕಳ ಮೂಲದ ವ್ಯಕ್ತಿಯೊಬ್ಬ ಬೈಕಿನಲ್ಲಿ ಬಂದು ರಟ್ಟು ಪ್ಲಾಸ್ಟಿಕ್ ಇತರೆ ಕಸವನ್ನು ರಸ್ತೆ ಬದಿ ಎಸೆಯುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಆ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿ ಸ್ಥಳಕ್ಕೆ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಗಣೇಶ್ ರವರನ್ನು ಕರೆಸಿದ್ದಾರೆ. ಕಸ ಎಸೆದ ವ್ಯಕ್ತಿಗೆ ಸ್ಥಳದಲ್ಲೇ 500 ರೂ. ದಂಡ ವಿಧಿಸಿ, ಅದೇ ವ್ಯಕ್ತಿಯಿಂದ ಕಸವನ್ನು ತೆಗೆಸಿ ಎಸ್.ಎಲ್.ಆರ್.ಎಂ. ವಾಹನಕ್ಕೆ ಹಾಕಲು ಸೂಚಿಸಿದ್ದಾರೆ.
ನೀರೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾರೂ ಎಲ್ಲೆಂದರಲ್ಲಿ ಕಸವನ್ನು ಎಸೆಯುವಂತಿಲ್ಲ, ಒಂದು ವೇಳೆ ಎಸೆದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಸ್ತೆ ಬದಿ ಕಸ ಎಸೆದಾತನಿಗೆ ದಂಡ ಹಾಕಿ ಅವರಿಂದಲೇ ಆ ಕಸವನ್ನು ತೆಗೆಸಿರುವ ಅಂಕಿತಾ ನಾಯಕ್ ಅವರ ಕಾರ್ಯ ವೈಖರಿಗೆ ಸಾರ್ವಜನಿಕರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.