ನವದೆಹಲಿ: ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ಗುರುವಾರ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನು ತ್ವರಿತವಾಗಿ ವಿಚಾರಣೆಗೆ ಸ್ವೀಕರಿಸಿ, ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಇದೀಗ ಸುಪ್ರೀಂಕೋರ್ಟ್ ತುರ್ತು ಅರ್ಜಿ ವಿಚಾರಣೆಗೆ ನಕಾರ ವ್ಯಕ್ತಪಡಿಸಿದೆ.
ಈ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಹಿಜಾಬ್ ವಿವಾದ ವಿಚಾರವಾಗಿ ಕರ್ನಾಟಕದ ಬೆಳವಣಿಗೆಗಳನ್ನು, ಹೈಕೋರ್ಟ್ ವಿಚಾರಣೆಯನ್ನು ನಾವು ಗಮನಿಸುತ್ತದ್ದೇವೆ. ಈ ವಿಚಾರವಾಗಿ ಮೊದಲು ಕರ್ನಾಟಕ ಹೈಕೋರ್ಟ್ ನಿರ್ಧಾರ ಮಾಡಲಿ. ಸೂಕ್ತ ಸಮಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುತ್ತದೆ. ಈ ವಿವಾದವನ್ನು ರಾಷ್ಟ್ರೀಯ ವಿವಾದವಾಗಿಸಬೇಡಿ ಎಂದು ಹೇಳಿದೆ.
ಹಿಜಾಬ್ ಧರಿಸಿ ಕಾಲೇಜು ಪ್ರವೇಶ ಅನುಮತಿ ಕೋರಿ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್ ಈ ವಿಚಾರವಾಗಿ ಅಂತಿಮ ತೀರ್ಪು ನೀಡುವ ತನಕ ಧಾರ್ಮಿಕ ಗುರುತುಗಳನ್ನು ಸೂಚಿಸುವ ಉಡುಪು ಧರಿಸಬಾರದು ಎಂದು ಆದೇಶ ಹೊರಡಿಸಿತ್ತು.