ಮಂಡ್ಯ: ಮಂಡ್ಯದ ಕಾಲೇಜಿನಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಹುಡುಗರ ಮುಂದೆ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಕಾನ್ ಖಾನ್ ವಿದ್ಯಾರ್ಥಿನಿಗೆ ಬಹುಮಾನಗಳ ಮಹಾಪೂರವೇ ಹರಿದುಬರುತ್ತಿದೆ. ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ಜಿಶಾನ್ ಸಿದ್ದಿಕ್ ಗುರುವಾರ ಮುಸ್ಕಾನ್ ಮನೆಗೆ ಭೇಟಿ ನೀಡಿ ಐ ಫೋನ್ ಮತ್ತು ವಾಚ್ ಉಡುಗೊರೆಯಾಗಿ ನೀಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಮುಸ್ಕಾನ್ ಖಾನ್ ವಿದ್ಯಾರ್ಥಿನಿ ಘೋಷಣೆ ಕೂಗಿರುವುದು ನನಗೆ ಹೆಮ್ಮೆ ಅನಿಸಿದೆ. ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು. ಹೆಣ್ಣುಮಕ್ಕಳು ತಮ್ಮ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ ಎಂದು ಶಾಸಕ ಜಿಶಾನ್ ಸಿದ್ದಿಕ್ ಹೇಳಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರು ಹಿಜಾಬ್ ಧರಿಸಿ ಕಾಲೇಜು ಆವರಣದೊಳಗೆ ಆಗಮಿಸುತ್ತಿದ್ದ ವೇಳೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಆಕೆಯನ್ನು ಸುತ್ತುವರಿದು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ, ಈ ವೇಳೆ ಆಕೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುವ ಮೂಲಕ ಪ್ರತಿರೋಧಿಸಿದ್ದಾಳೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದನ್ನು ಗಮನಿಸಿದ ಹಲವು ಮುಸ್ಲಿಂ ಸಂಘಟನೆಗಳು ಆಕೆಯ ಧೈರ್ಯವನ್ನು ಮೆಚ್ಚಿ ಬಹುಮಾನಗಳನ್ನು ನೀಡುತ್ತಿವೆ.