Sunday, June 8, 2025

ಪುಲ್ವಾಮ ದಾಳಿಗೆ 3 ವರ್ಷ- ಮರೆಯದಿರಿ ನಮ್ಮ ವೀರ ಯೋಧರ ತ್ಯಾಗವ

ಫೆ.14 2019 ಭಾರತೀಯರಿಗೆ ಎಂದೂ ಮರೆಯಲಾಗದ ದಿನವದು. ಆ ಕರಾಳ ದಿನ ನಡೆದು ಇಂದಿಗೆ 3 ವರ್ಷವಾಗುತ್ತದೆ. ಆ ದಿನ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಉಗ್ರರು ಆತ್ಮಹತ್ಯಾ ಬಾಂಬರ್ ಮೂಲಕ ದಾಳಿ ಮಾಡಿದ್ದರು. ಈ ಅತ್ಯಂತ ಭೀಕರ ಉಗ್ರರ ದಾಳಿಗೆ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಪುಲ್ವಾಮದಲ್ಲಿ ಈ ಭೀಕರ ಘಟನೆ ನಡೆದಿತ್ತು.

ಪಾಕ್ ಹೀನ ಕೃತ್ಯಕ್ಕೆ 40 ಯೋಧರು ಹುತಾತ್ಮ:

2019ರ ಫೆಬ್ರವರಿ 14 ರಂದು ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಉಗ್ರರು ಆತ್ಮಹತ್ಯಾ ಬಾಂಬರ್ ಮೂಲಕ ದಾಳಿ ಮಾಡಿದ್ದಾರೆ. ಪಾಕಿಸ್ತಾನದ ಈ ಹೀನ ಕೃತ್ಯಕ್ಕೆ 40 ಮಂದಿ ವೀರ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು. ಫೆಬ್ರವರಿ 14, 2019 ರಂದು ಮಧ್ಯಾಹ್ನ 3:15 ರ ಸುಮಾರಿಗೆ ಒಟ್ಟು 70 ವಾಹನಗಳಲ್ಲಿ 2500 ಸಿ ಆರ್ ಪಿ ಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಈ ವಾಹನಗಳ ಸಾಲಿನ ನಿರ್ಧಿಷ್ಟ ಒಂದು ಬಸ್ ಬಳಿ ಸ್ಫೋಟಕ ತುಂಬಿದ ಕಾರು ತರುವಲ್ಲಿ ಯಶಸ್ವಿಯಾದ ಉಗ್ರ ಅದನ್ನು ಸ್ಫೋಟಿಸಿದ. ಬಳಿಕ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ಆಕ್ರಮಣಕಾರ ಆದಿಲ್ ಅಹ್ಮದ್ (22 ವರ್ಷ) ನ ವೀಡಿಯೊವನ್ನು ಬಿಡುಗಡೆ ಮಾಡಿತ್ತು.

18 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ಮಂಡ್ಯದ ಗುಡಿಗೆರೆಯ ಯೋಧ ಹೆಚ್ ಗುರು ಈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದರು. ಉಗ್ರರ ಹಟ್ಟಹಾಸಕ್ಕೆ ವೀರ ಬಲಿದಾನ ಮಾಡಿದ 40 ಯೋಧರಲ್ಲಿ ಮಂಡ್ಯದ ಹೆಚ್ ಗುರು ಕೂಡಾ ಒಬ್ಬರು. ಈ ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ಮತ್ತೆ ಹದಗೆಟ್ಟಿತು. ದಾಳಿ ನಡೆದ ಮರುದಿನ ಅಂದರೆ 2019ರ ಫೆಬ್ರವರಿ 15ರಂದು ಈ ದಾಳಿಯನ್ನು ಪಾಕಿಸ್ತಾನ ಪ್ರಾಯೋಜಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತು. ಆತ್ಮಹತ್ಯಾ ಬಾಂಬರ್‌ ಆದಿಲ್ ಅಹ್ಮದ್ ದಾರ್ 200 ಕೆಜಿ ಸ್ಪೋಟಕವನ್ನು ಹೊತ್ತ ವಾಹನವನ್ನು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿತ್ತು.

ಇಡೀ ಭಾರತೀಯರು ಶೋಕ ಸಾಗರದಲ್ಲಿ ಮುಳುಗಿದ ದಿನ:

2004ರ ಉಗ್ರರ ದಾಳಿಯ ಬಳಿಕ ನಡೆದ ಅತ್ಯಂತ ಭೀಕರ ದಾಳಿ ಇದು. ಈ ಭೀಕರತೆ ದೃಶ್ಯ ಭಾರತೀಯರು ಎಂದೂ ಮರೆಯಲ್ಲ. ಅಂದು ಇಡೀ ಭಾರತ ಶೋಕ ಸಾಗರದಲ್ಲಿ ಮುಳುಗಿತು. ವೀರ ಸೈನಿಕರನ್ನು ನೆನೆಸಿ ಭಾರತೀಯ ಜನರು ಕಣ್ಣೀರು ಸುರಿದರು. ರಕ್ತಕ್ಕೆ ರಕ್ತ ಎಂಬಂತೆ ಭಾರತ ಜೈಷ್ ಇ ಮೊಹಮ್ಮದ್ ತರಬೇತಿ ಶಿಬಿರದ ವಿರುದ್ಧ ಭಯೋತ್ಪಾದನಾ ನಿಗ್ರಹ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು. ಫೆಬ್ರವರಿ 26, 2019ರ ಮುಂಜಾನೆ ಐಎಎಫ್ ಜೆಟ್‌ಗಳು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನ ಜೈಷ್ ಇ ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡಿ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಂಡವು.

ಪಾಕಿಸ್ತಾನದ ಹೇಡಿತನದ ಅಮಾನವೀಯ ದುಷ್ಕೃತ್ಯ ಜನರ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯಲಿದೆ. ಮರೆಯಬಾರದು ನಾವೆಂದು ನಮ್ಮ ವೀರ ಯೋಧರ ತ್ಯಾಗವನ್ನು. ನಮಗಾಗಿ ನಮ್ಮ ದೇಶಕ್ಕಾಗಿ, ತಮ್ಮ ಎಲ್ಲಾ ಸುಖ, ಸಂತೋಷವನ್ನು ಮರೆತು, ತಮ್ಮ ಕುಟುಂಬವನ್ನು ಬಿಟ್ಟು ರಣಭೂಮಿಯಲ್ಲಿ ಹೋರಾಡುವವರು ಆ ವೀರ ಯೋಧರು. ಯಾವ ಪ್ರಕೃತಿ ಭಾದೆಗೂ ಹೆದರದೆ ಶತ್ರುವಿನ ಹೆಡೆಮುರಿ ಕಟ್ಟಿ ಹಗಲು ಇರುಳು ಕಣ್ಣಿನ ರೆಪ್ಪೆಯಂತೆ ಈ ದೇಶವನ್ನು ಈ ನಮ್ಮ ಸೈನಿಕರು ಕಾಯುತ್ತಿರುತ್ತಾರೆ. ನಮ್ಮ ಆ ವೀರ ಸೈನಿಕರನ್ನು ಕೊಲ್ಲಲು ಪಾಕ್ ಮಹಾ ಸಂಚನ್ನು ಹೂಡಿತು. ನಮ್ಮ ವೀರ ಹುಲಿಗಳನ್ನು ಹೇಡಿಗಳಂತೆ ವಂಚಿಸಿ ಕೊಂದು ಬಿಟ್ಟರು. ಒಂದೇ ಕ್ಷಣದಲ್ಲಿ ಪುಲ್ವಾಮವನ್ನು ಮಸಣವಾಗಿಸಿದರು. ನಮ್ಮ ದೇಶಕ್ಕಾಗಿ ಆ ಯೋಧರು ವೀರ ಮರಣವನ್ನಪ್ಪಿದರು. ನಮ್ಮ ವೀರ ಯೋಧರು ಈ ದೇಶಕ್ಕಾಗಿ ಮಾಡುವ ತ್ಯಾಗ ಬಲಿದಾನವನ್ನು ನಾವು ಎಂದಿಗೂ ಮರೆಯಬಾರದು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles