ಸುರತ್ಕಲ್: ಸಾರ್ವಜನಿಕ ಸ್ಥಳದಲ್ಲಿ ಹಲ್ಲೆಗೆ ಯತ್ನ ಹಾಗೂ ಪ್ರಾಣ ಬೆದರಿಕೆ ಹಾಕಿದ ಆರು ಮಂಗಳಮುಖಿಯರನ್ನು ಬಂಧಿಸಿದ ಘಟನೆ ಮಂಗಳೂರು ನಗರ ಹೊರವಲಯದ ಸುರತ್ಕಲ್ ಎನ್.ಐ.ಟಿ.ಕೆ ಟೋಲ್ ಗೇಟ್ ಬಳಿ ನಡೆದಿದೆ.
ಅಕ್ರಮವಾಗಿ ಟೋಲ್ ನಡೆಸುತ್ತಿರುವುದಾಗಿ ಆರೋಪಿಸಿ, ಟೋಲ್ ಗೇಟ್ ತೆರವಿಗೆ ಪ್ರತಿಭಟನೆ ನಡೆಸುತ್ತಿದ್ದ ಆಸಿಫ್ ಎಂಬುವರ ಮೇಲೆ ನಿನ್ನೆ ಮಧ್ಯರಾತ್ರಿ ಹಲ್ಲೆಯ ಯತ್ನ ನಡೆದಿದೆ. ಹಲ್ಲೆಗೆ ಯತ್ನಿಸಿ, ಪ್ರಾಣ ಬೆದರಿಕೆ ಹಾಕಿದ ವಾಸವಿ ಗೌಡ, ಲಿಪಿಕಾ , ಹಿಮಾ, ಆದ್ಯ, ಮಾಯಾ , ಮೈತ್ರಿ ಎಂಬ ಆರು ಮಂಗಳಮುಖಿಯರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಆಸಿಫ್ ಪೊಲೀಸರಿಗೆ ದೂರು ನೀಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದುರ್ವರ್ತನೆ ತೋರಿದ ಆರೋಪದ ಮೇರೆಗೆ ಐ.ಪಿ.ಸಿ 504, 506 ಅಡಿಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.