ಮಣಿಪಾಲ: ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನದ ಅಂಗವಾಗಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶಂಕರ್ ಮಹಾದೇವನ್ ಅಕಾಡೆಮಿ ‘ನಿರ್ವಾಣ’ ಸಹಭಾಗಿತ್ವದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆ ಮಾಡುವವರಿಗೆ ಸಂಗೀತ ಕಾರ್ಯಕ್ರಮ ಮತ್ತು ಮೋಜಿನ ರಸಪ್ರಶ್ನೆ ಕಾರ್ಯಕ್ರಮವನ್ನು ಫೆ.16ರಂದು ವರ್ಚುವಲ್ ಆಗಿ ಆಯೋಜಿಸಲಾಗಿತ್ತು.
ಮಕ್ಕಳ ಹಾಗೂ ಆರೈಕೆ ಮಾಡುವವರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಮತ್ತು ಗುಣಪಡಿಸಲು ನಿಯತಕಾಲಿಕವಾಗಿ ಇಂತಹ ಮನರಂಜನಾ ಕಾರ್ಯಕ್ರಮ ಅಗತ್ಯ ಎಂದು ಮಕ್ಕಳ ರಕ್ತ ಶಾಸ್ತ್ರ ಮತ್ತು ಅಂಕೋಲಜಿ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಟ್.ಕೆ ತಿಳಿಸಿದರು.
ಸ್ವಾಗತ ಭಾಷಣ ಮಾಡಿದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರು ಮಕ್ಕಳ ರಕ್ತ ಶಾಸ್ತ್ರ ಮತ್ತು ಅಂಕೋಲಜಿ ತಂಡ ಸಂಗೀತ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ರೋಗಿಗಳಿಗೆ, ಅವರ ಆರೈಕೆ ಮಾಡುವವರಿಗೆ ಮನರಂಜನೆ ನೀಡುವ ಪ್ರಯತ್ನ ಶ್ಲಾಘಿಸಿದರು.
ಶಂಕರ್ ಮಹಾದೇವನ್ ಅಕಾಡೆಮಿ ‘ನಿರ್ವಾಣ’ದಿಂದ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೋಕ್ಷಾ ಮತ್ತು ಆಕಾಂಕ್ಷಾ, ಅಕಾಡೆಮಿ ಕಲಾವಿದೆ ಸುಕೃತಿ ಅಜಯ್ ಕುಮಾರ್ ಅವರು ಸಂಗೀತ ಪ್ರದರ್ಶನ ನೀಡಿದರು.
ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಎಸ್ ಸಲಿನ್ಸ್ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜಿಸಿದ ತಂಡವನ್ನು ಕೆಎಂಸಿ ಡೀನ್ ಡಾ.ಶರತ್ ಕುಮಾರ್ ರಾವ್ ಅವರು ಅಭಿನಂದಿಸಿ, ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕೃತಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.