ಥಾಣೆ: ಚಿರತೆ ಮರಿಯೊಂದು ಆಕಸ್ಮಿಕವಾಗಿ ನೀರಿನ ಕ್ಯಾನ್ ಅನ್ನು ತಲೆಗೆ ಸಿಕ್ಕಿಸಿಕೊಂಡಿದೆ. ಇದರಿಂದ ಚಿರತೆ ಮರಿ ನೋವನ್ನು ಅನುಭವಿಸಿದ್ದು ಸುಮಾರು 48 ಗಂಟೆಗಳ ನಂತರ ರಕ್ಷಣೆ ಮಾಡಿದ ಘಟನೆ ಥಾಣೆ ಜಿಲ್ಲೆಯ ಬದ್ಲಾಪುರ ಗ್ರಾಮದಲ್ಲಿ ನಡೆದಿದೆ.
ಬದ್ಲಾಪುರ ಗ್ರಾಮದ ದಾರಿ ಮಧ್ಯೆ ಚಿರತೆ ಮರಿಯೊಂದು ನೀರಿನ ಕ್ಯಾನ್ ಸಿಲುಕಿಸಿಕೊಂಡು ಒದ್ದಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ತರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ಮರಿಯನ್ನು ಸೆರೆ ಹಿಡಿದು, ಕಟ್ಟಿ ಹಾಕಿ ತಲೆಗೆ ಸಿಲುಕಿದ್ದ ನೀರಿನ ಕ್ಯಾನ್ ತೆಗೆದು ಚಿರತೆಯನ್ನು ರಕ್ಷಿಸಿದ್ದಾರೆ.
ಕಳೆದೆರಡು ದಿನದಿಂದ ತಲೆಗೆ ನೀರಿನ ಕ್ಯಾನ್ ಸಿಲುಕಿದ್ದರಿಂದ ಚಿರತೆ ಮರಿಗೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ ಜೊತೆಗೆ ಉಸಿರಾಡಲೂ ಕಷ್ಟ ಪಡುತ್ತಿತ್ತು. ಆಹಾರ ಸೇವಿಸದೆ ಬಳಲಿದ್ದ ಚಿರತೆಗೆ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಯಿತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿರತೆ ಮರಿಗೆ ಪ್ಲಾಸ್ಟಿಕ್ ಕ್ಯಾನ್ ಸಿಲುಕಿದ್ದ ಹಾಗೂ ಅದನ್ನು ರಕ್ಷಣೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.