ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ 2022ನೇ ಸಾಲಿನ ಕೇಂದ್ರ ಬಜೆಟ್ ವಿಶ್ಲೇಷಣಾ ಕಾರ್ಯಕ್ರಮ ಶನಿವಾರ ನಡೆಯಿತು.
ಕಲ್ಬಾವಿ ಕ್ಯಾಶ್ಯೂಸ್ನ ಆಡಳಿತ ಪಾಲುದಾರ ಪ್ರಕಾಶ್ ಕಲ್ಬಾವಿ ಮಾತನಾಡಿ, ಇಂದಿನ ಯುವಕರು ಉದ್ದಿಮೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ದೇಶದಲ್ಲಿ ನೀತಿಗಳನ್ನು ಪರಿಚಯಿಸುವುದು ಸುಲಭವಾಗುತ್ತಿದೆ. ಆದರೆ ಅವುಗಳ ಅನುಷ್ಠಾನ ವಿವಿಧ ಕಾರಣಗಳಿಂದ ನಿಧಾನ ಗತಿಯಲ್ಲಿ ಸಾಗುತ್ತಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ 36 ಟ್ರಿಲಿಯನ್ನಷ್ಟು ಕ್ರೆಡಿಟ್ಗಳ ಅಗತ್ಯವಿದೆ. ಅವುಗಳ ಮೇಲ್ವಿಚಾರಣೆ ನಡೆಸಲು ಇಂಡಿಪೆಂಡೆಂಟ್ ರೆಗ್ಯುಲೇಟರಿ ಸಿಸ್ಟಮ್ ಹಾಗೂ ಇ-ಲಿಂಕಿಂಗ್ ವ್ಯವಸ್ಥೆ ಪರಿಚಯಿಸಬೇಕು ಎಂದರು.
ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಉಪಾಧ್ಯಕ್ಷ ಗೌರವ್ ಹೆಗ್ಡೆ ಮಾತನಾಡಿ, ಪ್ರಸ್ತುತ ಬಜೆಟ್ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ. ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಇನ್ನಷ್ಟು ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿಕ ಹಾಗೂ ರಾಜಕೀಯ ಕಾರ್ಯಕರ್ತ ವಿಶ್ವೇಶ್ವರ ಭಟ್, ಮಂಗಳೂರಿನ ಯೂನಿಯನ್ ಬ್ಯಾಂಕ್ ಡೈರೆಕ್ಟರ್ ಜನರಲ್ ಮ್ಯಾನೇಜರ್ ಹಾಗೂ ಪ್ರಾದೇಶಿಕ ಮುಖ್ಯಸ್ಥ ಜೆ. ಮಹೇಶ್, ನಿವೃತ್ತ ಐಆರ್ಎಸ್ ಅಧಿಕಾರಿ ಜಯಪ್ರಕಾಶ್ ರಾವ್, ಸಿಎ ನಿತಿನ್ ಜೆ ಶೆಟ್ಟಿ, ಸಿಎ ಅನ್ವೇಶ್ ಶೆಟ್ಟಿ ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ, ಎಂಬಿಎ ವಿಭಾಗ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಉಪಸ್ಥಿತರಿದ್ದರು.
ಅರ್ಥಶಾಸ್ತಜ್ಞ ಡಾ.ಜಿ.ವಿ.ಜೋಷಿ ಹಾಗೂ ನಿಟ್ಟೆ ಸಂಸ್ಥೆಯ ಪ್ರಾಧ್ಯಾಪಕ ಡಾ.ಜ್ಞಾನೇಶ್ವರ್ ಎಂ.ಪೈ ಪ್ಯಾನೆಲ್ ಡಿಸ್ಕಶನ್ನ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ಪೋಸ್ಟರ್ ಪ್ರೆಸೆಂಟೇಶನ್ ಹಾಗೂ ಗ್ರೂಪ್ ಡಿಸ್ಕಶನ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಾನ್ಸನ್ ಫೆರ್ನಾಂಡಿಸ್ ಅತಿಥಿಗಳನ್ನು ಪರಿಚಯಿಸಿ, ಉಪನ್ಯಾಸಕಿ ಹರ್ಷಿತಾ ವಂದಿಸಿ, ಪುನೀತ್ಕೆ.ಜೆ ಹಾಗೂ ದೀಪಕ್ ನಿರೂಪಿಸಿದರು.