ಉಡುಪಿ: ನಾವು ನಮ್ಮ ಧರ್ಮವನ್ನು ಅಥವಾ ಇತರ ಧರ್ಮಾನುಯಾಯಿಗಳು ಅವರ ಧರ್ಮವನ್ನು ಅನುಸರಿಸುವುದರಿಂದ ಯಾರಿಗೂ ತೊಂದರೆಯಿಲ್ಲ. ಸಂವಿಧಾನದ ಪ್ರಕಾರ ಈ ದೇಶಕ್ಕೆ ಯಾವುದೇ ಭಾಷೆಯಿಲ್ಲ, ಸಂಸ್ಕೃತಿಯಿಲ್ಲ. ಅಂದರೆ ಎಲ್ಲಾ ಧರ್ಮವನ್ನು ಅನುಸರಿಸುವ ಮುಕ್ತ ಅವಕಾಶವನ್ನು ಸಂವಿಧಾನ ನೀಡಿರುವಾಗ ಕೆಲವರು ರಾಜಕೀಯ ಪ್ರೇರಿತವಾಗಿ ನಮ್ಮ ವಿದ್ಯಾರ್ಥಿಗಳು ಅನುಸರಿಸುವ ಶಿರವಸ್ತ್ರವನ್ನು ನಿಷೇಧಿಸುವಂತ ಸನ್ನಿವೇಶ ಉಂಟಾಗಿದೆ ಎಂದು ಕ್ಯಾಂಪಸ್ ಸಿಂಡಿಕೇಟ್ ಸದಸ್ಯ ಮಹಮ್ಮದ್ ರಫೀಕ್ ಕನ್ನಂಗಾರ್ ತಿಳಿಸಿದರು.
ಎಸ್ಎಸ್ಎಫ್ ಕರ್ನಾಟಕ ರಾಜ್ಯ ಇದರ ಅಧೀನದಲ್ಲಿ ಮಂಗಳವಾರ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಜಾಬ್ ಕುರಿತು ಕೋರ್ಟ್ ನಮಗೆ ಸಂವಿಧಾನ ಬದ್ಧವಾದ ತೀರ್ಪು ನೀಡಬಹುದೆಂಬ ಆಕ್ಷಾಂಕೆ ಇದೆ. ಆ ತೀರ್ಪನ್ನು ಅನುಸರಿಸುತ್ತೇವೆ. ಸಮವಸ್ತ್ರ ನೀತಿ ಇರುವ ಶಾಲಾ-ಕಾಲೇಜಿಗಳಲ್ಲಿ ಹಿಜಾಬ್ ಧರಿಸದಂತೆ ಕೋರ್ಟ್ ನೀಡಿದ ಮಧ್ಯಂತರ ತೀರ್ಪನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪರೀಕ್ಷೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಾಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದರು .
ಈ ಸಂದರ್ಭ ಶಾಹುಲ್ ಹಮೀದ್, ಕೆ.ಎಸ್ ಎಂ.ಮನ್ಸೂರ್ ಉಡುಪಿ, ಹ್ಯಾರಿಸ್ ಹೊಸ್ಮಾರ್, ಇಮ್ರಾನ್ ಬಸೀರ್ ಕಾಪು ಉಪಸ್ಥಿತರಿದ್ದರು.