ಉಡುಪಿ: ಮೂರು ತಿಂಗಳಿಂದ ವೇತನವಿಲ್ಲದೆ ಪರದಾಡುತ್ತಿರುವ ಆರೋಗ್ಯ ಸಿಬ್ಬಂದಿಗಳು ಮುಷ್ಕರ ನಡೆಸಿದ ಘಟನೆ ಉಡುಪಿಯ ಬಿಆರ್ ಶೆಟ್ಟಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಸದೆ ಬಾಕಿ ಇರಿಸಿರುವ ಆಸ್ಪತ್ರೆ ಆಡಳಿತ ಮಂಡಳಿಯನ್ನು ವಿರೋಧಿಸಿ ಬಿ.ಆರ್.ಶೆಟ್ಟಿ ಗ್ರೂಪ್ ಮುನ್ನಡೆಸುತ್ತಿರುವ ಉಡುಪಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ, ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ಬುಧವಾರದಿಂದ ಮತ್ತೆ ಅಹೋರಾತ್ರಿ ಮುಷ್ಕರವನ್ನು ಆರಂಭಿಸಿದ್ದಾರೆ. ಈ ವೇಳೆ ಎಲ್ಲಾ ಹೊರ ಹಾಗೂ ಒಳರೋಗ ವಿಭಾಗದ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.
ಸರ್ಕಾರ ಮತ್ತು ಬಿಆರ್ ಶೆಟ್ಟಿ ಕಂಪನಿಯ ನಡುವಿನ ತಿಕ್ಕಾಟದಿಂದಾಗಿ ಮೂರು ತಿಂಗಳಿನಿಂದ 153 ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ಇದರಿಂದ ಬೇಸತ್ತ ಸಿಬ್ಬಂದಿಗಳು ಹೆರಿಗೆ ಆಸ್ಪತ್ರೆಯ ಎದುರು ಮುಷ್ಕರ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.