ಹೆಬ್ರಿ: ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಿಂದೂ ಯುವಕರನ್ನು ಕೊಲೆ ಮಾಡಿಸಿ, ಹಿಜಾಬ್ ಗಲಾಟೆ, ಕೋಮುಗಲಭೆ ಸೃಷ್ಠಿಸುತ್ತಿದೆ. ಗಲಭೆಯ ಹಿಂದೆ ಬಿಜೆಪಿಯ ಕಾಣದ ಕೈಗಳ ಷಡ್ಯಂತ್ರ ಇದೆ. ಹತಾಷೆಯಿಂದಾಗಿ ಎಲ್ಲವೂ ನಡೆಯುತ್ತಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಸ್ಲಿಮರನ್ನು ಗುರಿಯಾಗಿಸಿ ಹಿಂದೂ ಯುವಕನ ಹತ್ಯೆ ನಡೆದಿದೆ. ಜನಸಾಮಾನ್ಯರ ಆಸ್ತಿಪಾಸ್ತಿಗಳು ಹಾನಿಯಾಗಿದ್ದು ಇದನ್ನು ಕಾಂಗ್ರೆಸ್ ಖಂಡಿಸುತ್ತದೆ. ಶಿವಮೊಗ್ಗದ ಹರೀಶ್ ಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಕುಮ್ಮಕ್ಕು ಇದೆ. ಬಿಜೆಪಿಯ ಆಡಳಿತ, ಬೆಲೆ ಏರಿಕೆಯಿಂದ ಜನತೆ ರೋಸಿ ಹೋಗಿರುವುದನ್ನು ಅರಿತು ಜನರನ್ನು ದಾರಿ ತಪ್ಪಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಮಂಜುನಾಥ ಪೂಜಾರಿ ದೂರಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಮಾತನಾಡಿ, ಈಶ್ವರಪ್ಪ ಅವರ ಕುಮ್ಮಕ್ಕಿನಿಂದಾಗಿ ಗಲಭೆ ಆಗಿದ್ದು ಸಚಿವ ಈಶ್ವರಪ್ಪ ಅವರು ರಾಜೀನಾಮೆ ನೀಡಿದರೆ ಮಾತ್ರ ಪಾರದರ್ಶಕ ತನಿಖೆ ನಡೆಯಲು ಸಾಧ್ಯವಿದೆ. ಸಿದ್ಧರಾಮಯ್ಯ ಸರ್ಕಾರದಲ್ಲಿ ಯಾವೂದೇ ಗಲಭೆಗಳು ಇರಲಿಲ್ಲ. ಹಿಂದೂ ಪರ ಸರ್ಕಾರ, ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವವರಿಂದಲೇ ಗಲಭೆಗಳು ನಡೆಯುತ್ತಿದೆ. ಮಾನವ ಧರ್ಮ ಮೊದಲು, ಆಮೇಲೆ ಎಲ್ಲಾ ಧರ್ಮಗಳು, ಮೊದಲು ಶಾಂತಿಯ ರಾಜ್ಯದ ನಿರ್ಮಾಣ ಮಾಡಿ ಎಂದು ಹೇಳಿದರು.
ಈ ಸಂದರ್ಭ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ ಕಬ್ಬಿನಾಲೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ್ ಕುಮಾರ್ ಅಜೆಕಾರ್, ಕಾಂಗ್ರೆಸ್ ವಿವಿಧ ಪ್ರಮುಖರಾದ ಹಾಜಿ ಸಾಹೇಬ್, ಆಸ್ಟೀನ್ ರಾಡ್ರಿಗಸ್, ವಿಶುಕುಮಾರ್, ಶಶಿಕಲಾ ಆರ್ ಪಿ, ಹರೀಶ ಕುಲಾಲ್ ಉಪಸ್ಥಿತರಿದ್ದರು.