ಉಡುಪಿ: ನಗರದ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಮೂರು ದಿನಗಳ ಡಾ.ನಿ.ಮುರಾರಿ ಬಲ್ಲಾಳ್ ಹಾಗೂ ಪ್ರೊ.ಕೆ.ಎಸ್.ಕೆದ್ಲಾಯ ನೆನಪಿನ ಮುರಾರಿ – ಕೆದ್ಲಾಯ ರಂಗೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ನೆಲಮಂಗಲದ ಯುವ ರಂಗ ನಿರ್ದೇಶಕ ಲಕ್ಷ್ಮಣ ಕೆ.ಪಿ. ಅವರು, ರಂಗಭೂಮಿಯ ಆಳದಲ್ಲಿ ರೂಪಾಂತರ ಆಗಬೇಕಾದ ಬಯಕೆ ಇರುತ್ತದೆ. ಆ ರೂಪಾಂತರ ಪ್ರಕೃತಿ ಸಹಜ ತತ್ವವೂ ಹೌದು. ರಂಗಭೂಮಿಯು ಆ ತತ್ವವನ್ನು ನಂಬಿಕೊಂಡಿದೆ ಎಂದರು.
ಬಳಿಕ ರಂಗಾಯಣ ಶಿವಮೊಗ್ಗ ಕಲಾವಿದರಿಂದ ವಿ.ದ.ಪೀಪಲ್ ಆಫ್ ಇಂಡಿಯಾ ಕನ್ನಡ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಉಡುಪಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್.ಎಸ್.ನಾಯ್ಕ್, ಹಿರಿಯ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.
ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ.ಮುರಳೀಧರ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು.