ಕುಂದಾಪುರ: ಮಾನವೀಯ ಸೇವೆ ಮತ್ತು ಜನಪರ ನೈಜ ರಾಜಕೀಯ ಮಾಡಲು ಎಸ್.ಡಿ.ಪಿ.ಐ ನೊಂದಿಗೆ ಕೈಜೋಡಿಸಬೇಕು. ಆ ಮೂಲಕ ದ್ವೇಷ ರಾಜಕೀಯವನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕೆಂದು ಎಸ್ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಕರೆ ನೀಡಿದರು.
ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಂಡ್ಲೂರು ಗ್ರಾಮ ಸಮಿತಿ ವತಿಯಿಂದ ಸಾರ್ವಜನಿಕ ಸೇವೆಗೆ ಕೊಡುಗೆಯಾಗಿ ನೀಡಲಾದ ನೂತನ ಆಂಬ್ಯುಲೆನ್ಸನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.
ಅಧ್ಯಕ್ಷತೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರ ಎಸ್ಡಿಪಿಐ ಸಮಿತಿ ಅಧ್ಯಕ್ಷ ಸುಹೇಲ್ ಮುಕ್ತೇಸರ್ ವಹಿಸಿದ್ದರು.
ಅಥಿತಿಗಳಾಗಿ ಆಗಮಿಸಿದ ಮೌಲಾನ ಉಬೆದುಲ್ಲಾ ಅಬೂಬಕ್ಕರ್ ನದ್ವಿ, ಇಸ್ಲಾಂ ಧರ್ಮ ಸಮಾಜ ಮತ್ತು ಮಾನವೀಯ ಸೇವೆ ಕುರಿತು ಹಾಗೂ ಶಾಫೀ ಬೆಳ್ಳಾರೆ ಪ್ರಸಕ್ತ ರಾಜಕೀಯ ವ್ಯವಸ್ಥೆ ಹಾಗೂ ಪರಿಹಾರದ ಕುರಿತು, ಕಂಡ್ಲೂರು ಜಾಮೀಯಾ ಮಸೀದಿ ಖತೀಬ್ ಮೌಲಾನ ಇಲ್ಯಾಸ್ ನದ್ವಿ ಮಾನವೀಯ ಸೇವೆ ಕಾಲದ ಬೇಡಿಕೆ ಕುರಿತು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ವೈದ್ಯ ಡಾ.ತಮೀಮ್ ಮುಕ್ತೇಸರ್ ಮತ್ತು ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಲತಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಲಿಯಾಕತ್ ಕಂಡ್ಲೂರು ಪ್ರಾಸ್ತವಿಕವಾಗಿ ಮಾತನಾಡಿ, ಎಸ್ಡಿಪಿಐ ಕಂಡ್ಲೂರು ಗ್ರಾಮ ಸಮಿತಿ ಅಧ್ಯಕ್ಷ ರಫೀಕ್ ಕಂಡ್ಲೂರು ವಂದಿಸಿದರು.