ಬೈಂದೂರು: ಧರ್ಮರಕ್ಷಣೆಗಾಗಿ ಪ್ರಾಣ ಕೊಟ್ಟ ಪ್ರತಿ ಹಿಂದೂ ಕಾರ್ಯಕರ್ತರ ಬದಲಿಗೆ ಸಾವಿರಾರು ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ. ಕೈಯಲ್ಲಿರುವ ಪಂಜು ಆರಿದರೂ ಹೃದಯದಲ್ಲಿನ ಕಿಚ್ಚು ಆರುವುದಿಲ್ಲ. ಹಿಂದುತ್ವಕ್ಕಾಗಿ ನಡೆದ ಬಲಿದಾನ ವ್ಯರ್ಥವಾಗಲ್ಲ. ನಮ್ಮನ್ನು ಜೈ ಭೀಮ್ ಹೆಸರಿನಲ್ಲಿ ಒಡೆಯಲು ಸಾಧ್ಯವಿಲ್ಲ. ನಾವು ಜೈ ಶ್ರೀರಾಮ್ ಹೇಳುವ ಬಾಯಲ್ಲಿಯೇ ಜೈ ಭೀಮ್ ಎಂದು ಗರ್ವದಿಂದ ಹೇಳುತ್ತೇವೆ. ರಾಮನು ನಮ್ಮವನೆ ಭೀಮನು ನಮ್ಮವನೆ ಎಂಬ ಕಲ್ಪನೆಯನ್ನು ಸಮಾಜಕ್ಕೆ ತಿಳಿಸಿದ್ದೇವೆ. ಜಾತಿ ಹೆಸರಲ್ಲಿ ಹಿಂದೂ ಸಮಾಜವನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.
ಭಜರಂಗದಳ ಕಾರ್ಯಕರ್ತ ಹರ್ಷ ಹಿಂದೂ ಹತ್ಯೆ ಖಂಡಿಸಿ, ಮತ್ತು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಹಿಂದೂ ಬಳಗ ನಾವುಂದ, ಮರವಂತೆ, ಕಿರಿಮಂಜೇಶ್ವರ, ನಾಡ ವಲಯದ ವತಿಯಿಂದ ಬೈಂದೂರು ತಾಲೂಕಿನ ಮರವಂತೆ ಶ್ರೀ ರಾಮಮಂದಿರ ಮರವಂತೆಯಿಂದ ಅರೆಹೊಳೆ ಕ್ರಾಸ್ ನಂದಿಕೇಶ್ವರ ದೇವಸ್ಥಾನದವರೆಗೆ ಬೃಹತ್ ಪಂಜಿನ ಮೆರವಣಿಗೆ ಗುರುವಾರ ನಡೆಯಿತು. ಆ ಬಳಿಕ ನಡೆದ ನಮನ ಕಾರ್ಯಕ್ರಮದಲ್ಲಿ ಚೈತ್ರ ಕುಂದಾಪುರ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.


ನಿವೃತ್ತ ಶಿಕ್ಷಕ ಸುಬ್ಬಣ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ರಾಮಮಂದಿರದಲ್ಲಿ ವಾಸು ಖಾರ್ವಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ನಿತ್ಯಾನಂದ ಉಪ್ಪುಂದ, ಅಕ್ಷಯ್ ತೆಗ್ಗರ್ಸೆ ಪ್ರಾರ್ಥಿಸಿದರು.