ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನಿಗೆ ರಸ್ತೆಯಲ್ಲಿಯೇ ಕಾರು ಚಾಲಕನೊಬ್ಬ ಹಲ್ಲೆಗೈದು, ಅವಾಚ್ಯವಾಗಿ ನಿಂದಿಸಿದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಸಮೀಪದ ಅಸೋಡಿನಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸದ್ಯ ಕಾರು ಚಾಲಕ ಕಾರಿನಿಂದ ಇಳಿದು ಲಾರಿ ಚಾಲಕನಿಗೆ ಹೊಡೆಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ತಲ್ಲೂರು ಗೋದಾಮಿನಿಂದ ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿ ಚಾಲಕ ಸಿಗಂದೂರು ಮೂಲದ ಮಹಮ್ಮದ್ ಇಸಾಕ್ ಅವರಿಗೆ ರಿಟ್ಸ್ ಕಾರಿನ ಚಾಲಕ ಹಲ್ಲೆಗೈದಿದ್ದಾನೆ. ಕಾರಿ ಚಾಲಕ ಕಾರನ್ನು ಲಾರಿಯ ಮುಂದಕ್ಕೆ ತಂದು ನಿಲ್ಲಿಸಿ ಲಾರಿ ಚಾಲಕನಿಗೆ ಹಲ್ಲೆಗೈದಿದ್ದಾನೆ. ಈ ಘಟನೆ ಮಾ.4ರಂದು ನಡೆದಿದ್ದು ಚಾಲಕ ಹೆದರಿ ದೂರು ನೀಡಲು ವಿಳಂಬ ಮಾಡಿದ ಹಿನ್ನಲೆ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾರು ಚಾಲಕನ ವಿರುದ್ಧ ಲಾರಿ ಚಾಲಕ ನೀಡಿದ ದೂರಿನ ಮೇರೆಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.