ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ಐದು ದಿನಗಳ ವರ್ಷಾವಧಿ ಮಹೋತ್ಸವವು ಅವಭೃತ ಸ್ನಾನ (ಓಕುಳಿ)ದೊಂದಿಗೆ ಭಾನುವಾರ ಸಂಪನ್ನಗೊಂಡಿತು.
ಕವಾಟೋದ್ಘಾಟನೆ, ತುಲಾಭಾರ ಸೇವೆ, ಅಷ್ಟಾವಧಾನ ಸೇವೆಯ ಬಳಿಕ ಓಕುಳಿ ನಡೆಯಿತು. ಕಾಳಿಕಾಂಬಾ ದೇವಳದಿಂದ ನಡೆದ ಓಕುಳಿ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ಮುಖ್ಯರಸ್ತೆ, ಕಲ್ಸಂಕ, ಹಳೆ ಪೊಲೀಸ್ ಠಾಣೆಯ ಮೂಲಕ ಸಾಗಿ ವೆಂಕಟರಮಣ ದೇವಸ್ಥಾನದ ಪುಷ್ಕರಣಿಯಲ್ಲಿ ದೇವರ ಅವಭೃತ ಸ್ನಾನ ನಡೆಯಿತು.
ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ಸಾಂಸ್ಕೃತಿಕ ವೈವಿಧ್ಯ, ಕಾಳಿಕಾಂಬಾ ಸೇವಾ ಸಮಿತಿಯ ಪ್ರಾಯೋಜಕತ್ವದಲ್ಲಿ ಕಾಪುರಂಗತರಂಗ ಕಲಾವಿದರಿಂದ ಅಧ್ಯಕ್ಷೆರ್ ತುಳು ಹಾಸ್ಯಮಯ ನಾಟಕ, ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನದ ವತಿಯಿಂದ ಶಿಲ್ಪವಿಜಯ ಯಕ್ಷಗಾನ ತಾಳಮದ್ದಲೆ, ಕಾಳಿಕಾಂಬಾ ಯಕ್ಷಗಾನ ಕಲಾಸಂಘದ ವತಿಯಿಂದ ಯಕ್ಷಗಾನ ಬಯಲಾಟ, ಗಾಯತ್ರಿ ಗಾನಸುಧಾ ಬಳಿಕ ಕಾಟಿಪಳ್ಳ ಇವರಿಂದ ಭಕ್ತಿ
ಭಾವ ಜಾನಪದ ಗಾನ ಲಹರಿ ಕಾರ್ಯಕ್ರಮ ನಡೆಯಿತು.
ಉತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಮುಖಂಡ ಜಗದೀಶ ಅಧಿಕಾರಿ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಜೆಡಿಎಸ್ ಮುಖಂಡ ತೋಡಾರು ದಿವಾಕರ ಶೆಟ್ಟಿ, ಎಂ.ಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು.