ಕುಂದಾಪುರ: ಹೆದ್ದಾರಿಯಲ್ಲಿ ಹೋಗುತ್ತಿದ್ದ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನ ಢಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುಂದಾಪುರದ ಹೆಮ್ಮಾಡಿಯಲ್ಲಿ ಭಾನುವಾರ ನಡೆದಿದೆ.
ಮೃತಪಟ್ಟ ಯುವತಿ ಅರೆಹೊಳೆ ಎರುಕೋಣೆ ಸಮೀಪದ ರಾಗಿಹಕ್ಲು ನಿವಾಸಿ ಜ್ಯೋತಿ ಎಂದು ಗುರುತಿಸಲಾಗಿದೆ. ಇವರ ಪತಿ ಶರತ್ ಹಾಗೂ ಮಗು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಅತಿವೇಗದಿಂದ ಬಂದಿದ್ದು ಅದೇ ದಾರಿಯಲ್ಲಿ ತೆರಳುತ್ತಿದ್ದ ಸ್ಕೂಟಿಗೆ ಢಿಕ್ಕಿಯಾಗಿದೆ. ತನ್ನ ಜೊತೆಗೆ ಬೀಳುತ್ತಿದ್ದ ಮಗುವನ್ನು ಇನ್ನೊಂದು ಮಗ್ಗುಲಿಗೆ ತಪ್ಪಿಸಿದ ಮಹಿಳೆ ಬೊಬ್ಬೆ ಹೊಡೆದರೂ ಕೇಳಿಸದೆ ಆಕೆಯ ಮೇಲೆ ಟಿಪ್ಪರ್ ಹರಿದಿದೆ. ಮಗು ಹಾಗೂ ಆಕೆಯ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ದಂಪತಿ ಕುಂದಾಪುರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.