ಕಾಪು: ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ಸಮುದ್ರ ಕಿನಾರೆ ಪ್ರದೇಶದಲ್ಲಿ ಕಡಲ್ಕೊರೆತಕ್ಕಾಗಿ ಈ ಹಿಂದೆ ನಿರ್ಮಿಸಿದ್ದ ತಡೆಗೋಡೆಯನ್ನು ಹೊಸ ತಡೆಗೋಡೆ ನಿರ್ಮಿಸುವ ಭರವಸೆ ನೀಡಿ ತೆರವುಗೊಳಿಸಲಾಗಿತ್ತು. ಇದರಿಂದ ಆತಂಕಗೊಂಡ ಸ್ಥಳೀಯ ನಿವಾಸಿಗಳು ದೂರು ನೀಡಿದ ಹಿನ್ನಲೆಯಲ್ಲಿ ಈ ಪ್ರದೇಶಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಭಾನುವಾರ ಭೇಟಿ ನೀಡಿದರು.
ತಡೆಗೋಡೆ ತೆಗೆದು, ಹೊಸ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಸುವ ಭರವಸೆ ನೀಡಿ ರಸ್ತೆ ನಿರ್ಮಿಸಲಾಗಿದ್ದು ಈಗ ಕಾಮಗಾರಿಯೇ ನಿಂತು ಹೋಗಿದೆ. ಏ-ಮೇ ತಿಂಗಳಲ್ಲಿ ಮಳೆ ಬಂದರೆ ಕಡಲಬ್ಬರ ಹೆಚ್ಚಾಗಿ ಈ ಭಾಗದ ಮನೆಗಳು ಮತ್ತು ತೆಂಗಿನಮರಗಳು ಸಮುದ್ರ ಪಾಲಾಗುವ ಭೀತಿ ಇದ್ದು, ಸಮುದ್ರ ತೀರದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಶಾಸಕರು, ಸಂಸದರು, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ತುರ್ತಾಗಿ ಸ್ಪಂದಿಸಿ ಸೂಕ್ತ ರೀತಿಯ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡು ಶೀಘ್ರವೇ ತಡೆಗೋಡೆ ನಿರ್ಮಿಸುವಂತೆ ವಿನಯಕುಮಾರ್ ಸೊರಕೆ ಆಗ್ರಹಿಸಿದರು.
ಈ ಸಂದಭ ಕಾಪು ಪುರಸಭಾ ಸದಸ್ಯೆ ರಾಧಿಕಾ ಸುವರ್ಣ, ಪೊಲಿಪು ಮೊಗವೀರ ಮಹಾಸಭಾದ ಅಧ್ಯಕ್ಷ ವಿಜಯ ಕರ್ಕೇರ, ಸ್ಥಳೀಯ ಪ್ರಮುಖರಾದ ವಾಮನ ಸುವರ್ಣ, ರಾಜೇಶ್ ಮೆಂಡನ್, ಮನೋಜ್ ಪುತ್ರನ್, ಪ್ರಭಾಕರ ಕುಂದರ್, ರವಿ ಮೆಂಡನ್, ಸೊರಕೆ ಅವರ ಆಪ್ತ ಕಾರ್ಯದರ್ಶಿ ಅಶೋಕ್ ನಾಯರಿ ಮತ್ತಿತರು ಉಪಸ್ಥಿತರಿದ್ದರು.