ಹೆಜಮಾಡಿ: ಎನ್ಐಟಿಕೆ ಸುರತ್ಕಲ್ನಲ್ಲಿ ಅವೈಜ್ಞಾನಿಕವಾಗಿ ಮತ್ತು ಕಾನೂನು ಬಾಹಿರವಾಗಿ ನಿರ್ಮಾಣಗೊಂಡ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ಗೇಟ್ ಚಲೋ ಪಾದಯಾತ್ರೆ ಮಾ.22ರಂದು ನಡೆಯಲಿದೆ ಎಂದು ಟೋಲ್ ಗೇಟ್ ಹೋರಾಟ ಸಮಿತಿ ಸಂಚಾಲಕ ಮುನಿರ್ ಕಾಟಿಪಳ್ಳ ಹೆಜಮಾಡಿ ಟೋಲ್ ಗೇಟ್ ಬಳಿ ಮಂಗಳವಾರ ಹೇಳಿದರು.
ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ದ.ಕ. ಉಡುಪಿಯದ್ಯಾಂತ 144 ಸೆಕ್ಷನ್ ಜಾರಿ ಇದ್ದುದರಿಂದ ಪಾದಯಾತ್ರೆಯನ್ನು ಮಾ.15 ರಿಂದ ಮಾ.22ಕ್ಕೆ ಮುಂದೂಡಲಾಗಿದೆ. ಆ ಹಿನ್ನೆಲೆ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಮೊಯ್ದಿನ್ ಬಾವ, ಹರೀಶ್ ಪುತ್ರನ್, ನ್ಯಾಯವಾದಿ ದಿನೇಶ್ ಉಳೆಪಾಡಿ, ಸುಧಾಕರ್ ಕಾರ್ಕಳ, ರಮೇಶ್ ಕೋಟ್ಯಾನ್, ಹರಿಕೃಷ್ಣ ಪುನರೂರು, ಶೇಖರ ಹೆಜಮಾಡಿ , ನವೀನ್ ಚಂದ್ರ ಜೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.