ಸುಳ್ಯ: ದೇಶದಲ್ಲಿ ದಿನೇ ದಿನೇ ಮಾದಕವಸ್ತು ಬಳಕೆ ಹೆಚ್ಚಾಗುತ್ತಿದೆ, ಈ ಪಿಡುಗಿನ ವಿರುದ್ಧ ಹೋರಾಟದ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆ, ದ.ಕ. ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನ ಹಾಗೂ ಜಾಗೃತಿ ತರಬೇತಿ ಶಿಬಿರ ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ, ಯಾವ ವಸ್ತುಗಳನ್ನು ಮನುಷ್ಯರು ಅತಿಯಾಗಿ ಸೇವಿಸಿದರೆ ಮನುಷ್ಯ ಸ್ಮಿತಿ ಕಳೆದುಕೊಳ್ಳುತ್ತಾನೋ ಅವೆಲ್ಲವೂ ಮಾದಕ ವಸ್ತುಗಳಾಗಿರುತ್ತದೆ. ಇತರರ ಪ್ರೇರಣೆಗೆ ಬಲಿಯಾಗಿ ಯುವಕ – ಯುವತಿಯರು ಮಾದಕ ಚಟಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಅಂತಹ ವ್ಯಕ್ತಿಗಳಿಂದ ದೂರವಿರಬೇಕು ಎಂದರು.
ಈ ಸಂದರ್ಭ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್, ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್, ದ.ಕ. ಸೆನ್ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸವಿತ್ರ ತೇಜ, ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್, ಸುಳ್ಯ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್, ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸುಳ್ಯ ನೆಹರು ಮೆಮೋರಿಯಲ್ ಕಾಲೇಜು, ಶಾರದಾ ಕಾಲೇಜ್, ಸುಳ್ಯ ಪದವಿ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾಲೇಜು ಉಪನ್ಯಾಸಕರುಗಳು ಉಪಸ್ಥಿತರಿದ್ದರು.
ವಿಜಯ ಕರ್ನಾಟಕ ಪತ್ರಿಕೆಯ ಪುತ್ತೂರು ವರದಿಗಾರ ಸುಧಾಕರ ಸುವರ್ಣನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.