ಕುಂದಾಪುರ: ಆಸ್ತಿ ಪಾಲಿನ ವಿಚಾರಕ್ಕೆ ತಂದೆಯನ್ನೇ ಮಗ ಹತ್ಯೆಗೈದ ಘಟನೆ ಕುಂದಾಪುರ ತಾಲೂಕಿನ ಗೋಪಾಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ನರಸಿಂಹ ಮೊಗವೀರ (72) ಕೊಲೆಯಾದ ದುರ್ದೈವಿ. ರಾಘವೇಂದ್ರ (38) ತಂದೆಯನ್ನು ಕೊಲೆ ಮಾಡಿದ ಆರೋಪಿ. ಆರೋಪಿ ರಾಘವೇಂದ್ರ ಕಳೆದ ಒಂಭತ್ತು ವರ್ಷಗಳಿಂದ ಜಾಗದ ವಿಚಾರಕ್ಕೆ ತಗಾದೆ ತೆಗೆಯುತ್ತಿದ್ದ. ಈತ ಶನಿವಾರ ರಾತ್ರಿ ಮನೆಯ ಅಂಗಳದಲ್ಲಿದ್ದ ಕಸಕಡ್ಡಿಗೆ ಬೆಂಕಿ ಹಾಕಿದ್ದು, ಪಕ್ಕದಲ್ಲೇ ದನದ ಕೊಟ್ಟಿಗೆ, ಹುಲ್ಲು ಇದ್ದ ಕಾರಣ ಬೆಂಕಿ ನಂದಿಸಲು ನರಸಿಂಹ ಅವರು ಮುಂದಾದ ವೇಳೆ ತಂದೆಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ತಪ್ಪಿಸಲು ಬಂದ ಸಹೋದರಿಗೂ ಹಲ್ಲೆ ಮಾಡಿದ್ದಾನೆ.
ತೀವ್ರ ರಕ್ತ ಸ್ರಾವದಿಂದ ನರಸಿಂಹ ಅವರು ಮೃತಪಟ್ಟಿದ್ದು, ಸಹೋದರಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ರಾಘವೇಂದ್ರನನ್ನು ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.