ಕುಂದಾಪುರ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕುಂದಾಪುರದ ತ್ರಾಸಿ ಗ್ರಾಮ ಹಾಗೂ ಮೋವಾಡಿಯಲ್ಲಿ ಅನಧಿಕೃತ ಮರಳುಗಾರಿಕೆಗೆ ಬಳಸುತ್ತಿದ್ದ 6 ದೋಣಿಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳು ತ್ರಾಸಿ ಗ್ರಾಮದ ಅರಮ ದೇವಸ್ಥಾನದ ಸಮೀಪದ ಸೌಪರ್ಣಿಕಾ ನದಿಯಲ್ಲಿ ಅನಧಿಕೃತ ಮರಳುಗಾರಿಕೆಗೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಮರಳುಗಾರಿಕೆಗೆ ಬಳಸುತ್ತಿದ್ದ 4 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ ಮೊವಾಡಿ ಬ್ರಿಡ್ಜ್ ಸಮೀಪವೂ ಅನಧಿಕೃತ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ 2 ದೋಣಿ ಸೇರಿದಂತೆ ಒಟ್ಟು ಆರು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ತ್ರಾಸಿ, ಮೊವಾಡಿ, ಗುಡ್ಡೆಯಂಗಡಿಯ ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ದೂರಿನ ಮೇರೆಗೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ದಾಳಿ ನಡೆಸಿದ್ದಾರೆ.
ಮೊವಾಡಿ, ನಾಡ ಹಾಗೂ ಬಡಾಕೆರೆ ವ್ಯಾಪ್ತಿಯಲ್ಲಿ ಅನೇಕ ಕಡೆ ಮರಳು ಗಣಿಗಾರಿಕೆಗೆ ನಡೆಸುವ ಮರಳು ದಕ್ಕೆಗಳಿವೆ. ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ನಾಡ ಬಡಾಕೆರೆ ವ್ಯಾಪ್ತಿಯ ಕೆಲವೆಡೆ ಅನಧಿಕೃತ ಮರಳು ದಂಧೆ ನಡೆಸುವವರು ಮರಳು ಗಣಿಗಾರಿಕೆಗೆ ಬಳಸುವ ದೋಣಿಗಳನ್ನು ಹಾಗೂ ಇನ್ನಿತರ ಪರಿಕರಗಳನ್ನು ನೀರಿನಲ್ಲಿ ಮುಳುಗಿಸಿ ಪರಾರಿಯಾಗಿದ್ದಾರೆ.