ಮಂಗಳೂರು: ಪರೀಕ್ಷೆಯಲ್ಲಿ ಮಕ್ಕಳು ತಪ್ಪಾಗಿ ಭಾರತ ಭೂಪಟ ಬಿಡಿಸುವುದು ಸಹಜ. ಆದರೆ ಪಶ್ನೆ ಪತ್ರಿಕೆಯಲ್ಲೇ ಭಾರತ ಭೂಪಟವು ತಪ್ಪಾಗಿ ಮುದ್ರಿಸಿರುವುದು ವಿಚಿತ್ರವೇ ಸರಿ. ಕರ್ನಾಟಕ ಪಿಯು ಶಿಕ್ಷಣ ಮಂಡಳಿ ಭಾರತದ ಭೂಪಟದಲ್ಲಿ ಕಾಶ್ಮೀರದ ಒಂದು ಭಾಗವೇ ಇಲ್ಲದಂತೆ ಭಾರತದ ನಕ್ಷೆಯನ್ನು ಮುದ್ರಿಸಿದೆ.
ಮಾ.19ರಂದು ದ.ಕ ಜಿಲ್ಲೆಯಲ್ಲಿ ನಡೆದ ಇತಿಹಾಸ ವಿಷಯದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಇಲಾಖೆ ನೀಡಿದ ಭಾರತ ನಕ್ಷೆಯಲ್ಲಿ ಅರ್ಧ ಕಾಶ್ಮೀರವೇ ಮಾಯವಾಗಿದೆ. ಭಾರತ ನಕ್ಷೆಯಲ್ಲಿ ಐದು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಆ ಸ್ಥಳಗಳ ಬಗ್ಗೆ ಎರಡು ವಾಕ್ಯಗಳಲ್ಲಿ ವಿವರಣೆ ಬರೆಯಲು ಹೇಳಲಾಗಿತ್ತು. ಆದರೆ ಆ ನಕ್ಷೆಯಲ್ಲಿ ಅರ್ಧ ಕಾಶ್ಮೀರವೇ ಇಲ್ಲದಿರುವುದು ಕಂಡುಬಂದಿದೆ.
ದ.ಕ. ಜಿಲ್ಲೆಯಲ್ಲಿ ನೀಡಿದ ಪಶ್ನೆ ಪತ್ರಿಕೆಯಲ್ಲಿ ಮಾತ್ರ ಈ ಲೋಪ ಕಂಡುಬಂದಿದ್ದು, ಇತರ ಜಿಲ್ಲೆಗಳಲ್ಲಿ ನೀಡಿದ ಪಶ್ನೆ ಪತ್ರಿಕೆಯಲ್ಲಿ ಈ ಲೋಪ ಕಂಡುಬಂದಿಲ್ಲ. ಘಟನೆ ಕುರಿತು ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಹಂತದಲ್ಲಿ ಚರ್ಚೆ ಪ್ರಾರಂಭವಾಗಿ ಪತ್ರಿಭಟನೆ ಹಂತ ತಲುಪಿದೆ. ಆದರೆ ಅಧಿಕಾರಿಗಳು ಈ ಕುರಿತು ಆಕ್ಷೇಪ, ದೂರು ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.