ಸುಳ್ಯ: ಕಾರೊಂದು ಬೈಕ್ ಮತ್ತು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾದ ಘಟನೆ ಸುಳ್ಯ ತಾಲೂಕಿನ ಅರಂಬೂರು ಸಮೀಪದ ಪಾಲಡ್ಕ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಬೈಕ್ ಸವಾರ ಸಚಿನ್ ಹಾಗೂ ರಿಕ್ಷಾ ಪ್ರಯಾಣಿಕರಾದ ನಳಿನಾಕ್ಷ ಮತ್ತು ಮುಳ್ಯದ ಅಶೋಕ್ ಗಾಯಗೊಂಡಿದ್ದಾರೆ. ಮಾರುತಿ ಕಾರು ಚಲಾಯಿಸುತ್ತಿದ್ದ ಸುಕುಮಾರ ಎಂಬುವವರು ಅರಂಬೂರು ಬಳಿಯ ಪಾಲಡ್ಕ ಎಂಬಲ್ಲಿ ನಿಂತಿದ್ದ ಬೈಕ್ ಗೆ ಗುದ್ದಿದ್ದಾರೆ. ಪರಿಣಾಮ ಬೈಕ್ ಜಖಂಗೊಂಡು ಸವಾರ ಗಾಯಗೊಂಡಿದ್ದಾರೆ.
ಆ ಬಳಿಕ ಕಾರು ಚಾಲಕ ಕಾರನ್ನು ತಿರುಗಿಸಿ ಸುಳ್ಯ ಕಡೆಗೆ ಚಲಾಯಿಸಿದ್ದು, ಕುಂಬಳಚೇರಿ ಕುಂದಲ್ಪಾಡಿ ಕಡೆಯಿಂದ ಸಾರಣೆ ಕೆಲಸ ಮುಗಿಸಿ ರಿಕ್ಷಾದಲ್ಲಿ ಹಿಂತಿರುಗುತ್ತಿದ್ದ ರವಿ ಕನಕಮಜಲು ಎಂಬುವವರ ರಿಕ್ಷಾಕ್ಕೆ ಗುದ್ದಿದ್ದಾರೆ. ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುದ್ದಿದ ಕಾರನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಆ ಬಳಿಕ ವಿಷಯ ತಿಳಿದ ಪೊಲೀಸರು ಚಾಲಕನನ್ನು ಬೆನ್ನಟ್ಟಿ ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.