ಚಿಕ್ಕಬಳ್ಳಾಪುರ: ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ ಮಾ.27ರಂದು ಆಚರಿಸುತ್ತಿರುವ ಕೈವಾರ ತಾತಯ್ಯನವರ 296ನೇ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಮುದಾಯದ ಹೆಸರನ್ನೇ ತಪ್ಪಾಗಿ ಪ್ರಕಟಿಸಲಾಗಿದೆ.
ಆಹ್ವಾನಿತ ಗಣ್ಯರ ಹೆಸರಿನ ಮುಂದೆ ಪ್ರತಿ ಕಡೆಯೂ ಬಲಜಿಗ ಸಮುದಾಯ ಎಂದು ಪ್ರಕಟಿಸಲಾಗಿದ್ದು, ಈ ಆಹ್ವಾನ ಪತ್ರಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದ ಪ್ರಕಟಿಸಲಾಗಿದೆ. ಆಹ್ವಾನ ಪತ್ರಿಕೆ ಮುದ್ರಿಸುವುದಕ್ಕೂ ಮೊದಲು ತಿಳಿದವರನ್ನು ಕೇಳಬಹುದಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಲಿ ಚಕ್ರವರ್ತಿಯ ಸಮುದಾಯ ಎಂಬ ಕಾರಣಕ್ಕೆ ಬಲಿಜ ಸಮುದಾಯ ಎನ್ನಲಾಗುತ್ತದೆ. ಆಹ್ವಾನ ಪತ್ರಿಕೆಯಲ್ಲಿ ಬಲಿಜ ಸಮುದಾಯ ಎಂದು ಪ್ರಕಟಿಸುವ ಬದಲು ಬಲಜ ಸಮುದಾಯ ಎಂದು ತಪ್ಪಾಗಿ ಪ್ರಕಟಿಸಲಾಗಿದೆ. ಈ ತಪ್ಪನ್ನು ಸಮುದಾಯದ ಮುಖಂಡರೂ ಪ್ರಶ್ನಿಸಿದ ಬಗ್ಗೆ ಮಾಹಿತಿ ಇಲ್ಲ. ಮೊದಲ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿಯೇ ಸಮುದಾಯದ ಹೆಸರು ತಪ್ಪಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.