ಬೆಳ್ಮಣ್: ಕಳೆದ ಎರಡು ವರ್ಷಗಳ ಹಿಂದೆ ಭಾರೀ ಸಂಚಲನ ಸೃಷ್ಟಿಸಿ ತಣ್ಣಗಾಗಿದ್ದ ಬೆಳ್ಮಣ್ನಲ್ಲಿ ಟೋಲ್ ಗೇಟ್ ಸ್ಥಾಪನೆ ವಿಚಾರ ಇದೀಗ ಮತ್ತೆ ಮರುಜೀವ ಪಡೆದುಕೊಂಡಿದೆ.
ಶೀಘ್ರದಲ್ಲೇ ರಾಜ್ಯದ 10 ಹೆದ್ದಾರಿಗಳಲ್ಲಿ ಟೋಲ್ ಗೇಟ್ ಆರಂಭವಾಗಲಿದ್ದು, ಖಾಸಗಿ ಕಂಪೆನಿಗಳು ಸುಂಕ ಸಂಗ್ರಹಕ್ಕೆ ಸಲ್ಲಿಸಿದ ಬಿಡ್ಗಳ ಪರಿಶೀಲನೆಯಾಗುತ್ತಿದೆ ಎಂಬ ಮಾಹಿತಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1ರ ಬೆಳ್ಮಣ್ ಪೇಟೆಯ ಟೋಲ್ ಗೇಟ್ ಕೂಡ ಒಂದು. ಈ ಹಿಂದೆ ಟೋಲ್ ಗೇಟ್ ನಿರ್ಮಾಣ ಪ್ರಸ್ತಾಪವಾದಾಗ ಸ್ಥಳೀಯರು ವಿರೋಧಿಸಿ ಹೋರಾಟ ನಡೆಸಿದ್ದರು. ಇದೀಗ ಟೋಲ್ ಗೇಟ್ ಸ್ಥಾಪನೆ ವಿಚಾರ ಮತ್ತೆ ಬುಗಿಲೆದ್ದಿದೆ.
ರಾಜ್ಯಾದ್ಯಂತ 31ರಾಜ್ಯ ಹೆದ್ದಾರಿಗಳನ್ನು ಲೋಕೋಪಯೋಗಿ ಇಲಾಖೆಯ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ (ಕೆಶಿಪ್) ನಿರ್ಮಾಣ ಮಾಡುತ್ತಿದೆ. ಈ ಪೈಕಿ 4 ಸರ್ಕಾರಿ ಖಾಸಗಿ ಪಾಲುದಾರಿಕೆಯದಾಗಿದ್ದು ಈಗಾಗಲೇ ಇಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ.
ಕಾರ್ಕಳ-ಪಡುಬಿದ್ರಿ ರಸ್ತೆಯಲ್ಲಿ ಟೋಲ್ ಸಂಗ್ರಹವಾಗುವ ಬಗ್ಗೆ ಕಳೆದ ಎರಡು ವರ್ಷಗಳ ಹಿಂದೆ ಭಾರೀ ಹೋರಾಟಗಳು, ಪ್ರತಿಭಟನೆ ನಡೆದಿತ್ತು. ಈಗ ಮತ್ತೆ ಈ ಟೋಲ್ ವಿಚಾರ ಮುನ್ನಲೆಗೆ ಬಂದಿದ್ದು ಆದರೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಬಿಡುವುದಿಲ್ಲ ಎಂದು ಹೋರಾಟ ಸಮಿತಿ ಅಧ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ ನ್ಯೂಸ್ ಪ್ಲಸ್ಗೆ ತಿಳಿಸಿದ್ದಾರೆ.