ಉಳ್ಳಾಲ: ಬೈಕಿಗೆ ಹಿಂಬದಿಯಿಂದ ಲಾರಿ ಗುದ್ದಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಉಳ್ಳಾಲದ ಎಕ್ಕೂರು ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಕೊಲ್ಯ ಕನೀರುತೋಟ ನಿವಾಸಿ ಚಿತ್ರಕಲಾವಿದ ರವಿಕುಮಾರ್ (45) ಎಂದು ಗುರುತಿಸಲಾಗಿದೆ.
ರವಿಕುಮಾರ್ ಕೆಲಸದ ನಿಮಿತ್ತ ಕೊಲ್ಯದಿಂದ ಮಂಗಳೂರು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ಹಿಂಬದಿಯಿಂದ ಅತಿವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಬಂದ ಲಾರಿ ಢಿಕ್ಕಿ ಹೊಡೆದಿದೆ.
ಸುಮಾರು 35 ವರ್ಷಗಳಿಂದ ಚಿತ್ರಕಲಾವಿದರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಕುಮಾರ್ ಓರ್ವ ಪ್ರಾಣಿ, ಪಕ್ಷಿ ಹಾಗೂ ಪ್ರಕೃತಿ ಪ್ರಿಯರಾಗಿದ್ದರು. ಜನಸ್ನೇಹಿಯಾಗಿದ್ದ ರವಿಕುಮಾರ್ ಅಗಲಿಕೆಯಿಂದ ಬಂಧು-ಮಿತ್ರರು ಹಾಗೂ ಅಭಿಮಾನಿಗಳು ದುಃಖಿತರಾಗಿದ್ದಾರೆ.