ಉಡುಪಿ: ಧ್ವನಿವರ್ಧಕ ನಿಯಮ ಹಿಂದೂ ಧರ್ಮೀಯರಿಗೂ ಅನ್ವಯಿಸುತ್ತದೆ. ಧ್ವನಿವರ್ಧಕ ಬಳಸುವುದಾದರೆ ತೀವ್ರತೆ ಕಡಿಮೆ ಇರಬೇಕು. ಎಲ್ಲಾ ಹಿಂದೂ ಧಾರ್ಮಿಕ ಕೇಂದ್ರಗಳು ಇದನ್ನು ಅನುಸರಿಸಬೇಕು. ವಿಶೇಷ ದಿನ ವಿಶೇಷ ಸಂದರ್ಭದಲ್ಲಿ ಪರವಾನಿಗೆ ಪಡೆಯೋಣ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು ಸಮಾಜ ನೆಮ್ಮದಿಯಿಂದ ಬಾಳಿ ಬದುಕಲು ನೀತಿ ನಿಯಮಗಳು ಇವೆ. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಸರ್ಕಾರ, ಸಂವಿಧಾನ, ಸುಪ್ರೀಂ ಕೋರ್ಟ್ ಎಲ್ಲವೂ ಇದೆ. ನಾವೇ ಮಾಡಿದ ವ್ಯವಸ್ಥೆಗಳು ನಾವು ಹೇಗಿರಬೇಕು ಎಂದು ನಿರ್ಧಾರ ಮಾಡುತ್ತದೆ. ನಿಯಮಕ್ಕೆ ಬದ್ಧರಾಗಿ ನಡೆದುಕೊಂಡರೆ ಯಾವುದೇ ಗೊಂದಲ ಇರುವುದಿಲ್ಲ. ಸಮಾಜದಲ್ಲಿ ಶಾಂತಿ ನೆಮ್ಮದಿ ಉಳಿಯಲು ಪ್ರಜೆಗಳು ನಿಯಮ ಪಾಲಿಸುವುದು ಅತ್ಯಗತ್ಯ ಎಂದರು.
ವಿಶೇಷ ದಿನಗಳು, ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡಬೇಕು. ಸುಪ್ರೀಂ ಕೋರ್ಟ್ ಒಂದು ವರ್ಗ, ಒಂದು ಸಮಾಜಕ್ಕೆ ಆದೇಶ ನೀಡಿಲ್ಲ. ಶಬ್ದದ ತೀವ್ರತೆಗೊಂದು ನಿಯಮ ನಿಗದಿಯಾಗಿದೆ. ಇದರಿಂದಾಗಿ ಹಿಂದೂ ಧಾರ್ಮಿಕ ಕೇಂದ್ರಗಳೂ ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.