ಸುಳ್ಯ: ಸುಳ್ಯ ಕಲ್ಲುಮುಟ್ಲುವಿನ ನಗರ ಪಂಚಾಯತ್ ಕುಡಿಯುವ ನೀರಿನ ಪಂಪ್ ಹೌಸ್ ಬಳಿ ಭೂ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂ ಕುಸಿತ ಪ್ರದೇಶ ಮತ್ತು ನದಿ ನೀರಿಗೆ ಮುಳುಗಡೆಗೊಂಡು ಕಾಮಗಾರಿ ಸ್ಥಗಿತಗೊಂಡಿರುವುದನ್ನು ವೀಕ್ಷಿಸಿದ ಸಚಿವರು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಜಾಕ್ವೆಲ್ ಕಾಮಗಾರಿ ತಡವಾಗಿರುವುದಕ್ಕೆ ಇಂಜಿನಿಯರ್ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಾಮಗಾರಿ ಮಾಡಲು ಇಷ್ಟು ವಿಳಂಬ ಮಾಡಿರುವುದು ಯಾಕೆ. ತಡ ಆಗಿರುವುದರಿಂದ ಈಗ ಮಳೆ ಬಂದು ಸಮಸ್ಯೆ ಆಗಿದೆ. ಕೆಲಸ ಇನ್ನಷ್ಟು ವಿಳಂಬ ಮಾಡಲು ಯಾವುದೇ ಸಬೂಬು ಬೇಡ. ಎಲ್ಲಾ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಆದಷ್ಟು ಬೇಗ ಜಾಕ್ವೆಲ್ ಕಾಮಗಾರಿ ಪೂರ್ತಿ ಮಾಡಬೇಕು ಎಂದು ಸಚಿವರು ತಾಕೀತು ಮಾಡಿದರು. ಜಾಕ್ವೆಲ್ ಕಾಮಗಾರಿಯ ಸಂಪೂರ್ಣ ಮಾಹಿತಿ, ಕಾಮಗಾರಿಯ ಪ್ರಗತಿ ವಿವರದೊಂದಿಗೆ ಶನಿವಾರ ತಮ್ಮನ್ನು ಭೇಟಿ ಮಾಡಿ ಮಾಹಿತಿ ನೀಡುವಂತೆ ಅವರು ಇಂಜಿನಿಯರ್ಗಳಿಗೆ ಮತ್ತು ಸಂಬಂಧಪಟ್ಟವರಿಗೆ ಸೂಚಿಸಿದರು.
ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನಗರ ಪಂಚಾಯತ್ ಸದಸ್ಯ ಬೂಡು ರಾಧಾಕೃಷ್ಣ ರೈ, ಬಿಜೆಪಿ ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಪ್ರಮುಖರಾದ ಹರೀಶ್ ರೈ ಉಬರಡ್ಕ, ಜಿನ್ನಪ್ಪ ಪೂಜಾರಿ, ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್ ಉಪಸ್ಥಿತರಿದ್ದರು