ಬೈಂದೂರು: ಕಡಲಿನ ಅಬ್ಬರಕ್ಕೆ ಸಿಲುಕಿ ಮುರಿದುಬಿದ್ದ ದೋಣಿಯಲ್ಲಿ ಸಿಲುಕಿದ್ದ ಐವರು ಮೀನುಗಾರರನ್ನು ರಕ್ಷಿಸಿರುವ ಘಟನೆ ಶಿರೂರು ಎಂಬಲ್ಲಿ ಭಾನುವಾರ ನಡೆದಿದೆ.
ಶಿರೂರಿನ ಮುಸ್ತಕ್ ಎಂಬುವವರ ಬೀಬಿ ಅಮೀನ ಹೆಸರಿನ ಗಿಲ್ ನೆಟ್ ದೋಣಿಯಲ್ಲಿ ಐವರು ಮೀನುಗಾರರು ಶಿರೂರಿನಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಕಡಲಿನ ಅಬ್ಬರಕ್ಕೆ ದೋಣಿ ಎರಡು ಭಾಗವಾಗಿದೆ ಎಂದು ತಿಳಿದುಬಂದಿದೆ.
ಇದರಲ್ಲಿ ಸಿಲುಕಿಕೊಂಡಿದ್ದ ಮೀನುಗಾರರು ತಕ್ಷಣ ವೈರ್ಲೆಸ್ ಮೂಲಕ ಸಂಬಂಧಪಟ್ಟರಿಗೆ ಮಾಹಿತಿ ನೀಡಿದರು. ಈ ಮಾಹಿತಿ ಸಮೀಪದಲ್ಲಿದ್ದ ಇರ್ಫಾನ್ ಎಂಬುವವರ ಸೈಫಾ ಬೋಟಿನಲ್ಲಿದ್ದ ಮೀನುಗಾರರಿಗೆ ನೀಡಲಾಯಿತು.
ಅಲ್ಲಿಯವರೆಗೆ ಈ ಐವರು ಮೀನುಗಾರರು ಬೋಟಿನ ಒಂದು ಭಾಗವನ್ನು ಹಿಡಿದುಕೊಂಡು ಅಪಾಯದ ಸ್ಥಿತಿಯಲ್ಲಿದ್ದರು. ಸುಮಾರು 2ತಾಸುಗಳ ಬಳಿಕ ಸೈಫಾ ಬೋಟು ಸ್ಥಳಕ್ಕೆ ಆಗಮಿಸಿತು.
ಅಪಾಯದಲ್ಲಿ ಸಿಲುಕಿದ್ದ ಬೋಟಿನಲ್ಲಿದ್ದ ಶಿರೂರು ಕಳುಹಿತ್ಲು ಮುಷ್ತಕ್(52), ಅಶ್ರಫ್(37), ಶಬ್ಬೀರ್(50), ಗೌಸಿಯಾ ಮೊಹಲ್ಲಾದ ಅಬೂಬಕ್ಕರ್(55), ಬೊಂಬ ಮೀರಾ(47) ಎಂಬವರನ್ನು ರಕ್ಷಿಸಿ ತೀರಕ್ಕೆ ಕರೆದು ಕೊಂಡು ಬರಲಾಯಿತು ಎಂದು ತಿಳಿದುಬಂದಿದೆ.
ಹಾನಿಗೊಳಗಾದ ದೋಣಿ ಮತ್ತು ಬಲೆಯನ್ನು ಅಲ್ಲೆ ಬಿಟ್ಟು ಬರಲಾಗಿದೆ. ಇದರಿಂದ ಸುಮಾರು ಹತ್ತು ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.