ಸುಳ್ಯ: ಅಮೃತ ಭಾರತಿಗೆ ಕನ್ನಡದ ಆರತಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವು ಮೇ.28ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ದೀಪ ಬೆಳಗಿಸಿ ಉದ್ಘಾಟಿಸಿದರು, ಬಳಿಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರಲ್ಲಿ ದೇಶಾಭಿಮಾನ ಮೂಡಿಬರಬೇಕು. ಭಾರತ ಮಾತೆಯ ಬಗ್ಗೆ ಗೌರವ ಬರಬೇಕು.
ದೇಶದ ಇತಿಹಾಸವನ್ನು ತಿಳಿದುಕೊಂಡು ಇತಿಹಾಸ ನಿರ್ಮಾಣ ಮಾಡಬೇಕು. ಬಂಗ್ಲೆಗುಡ್ಡೆಯಲ್ಲಿರುವ ಕಟ್ಟಡವನ್ನು ಉಳಿಸಿಕೊಂಡು ಅದನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ಮಾಜಿ ಸಚಿವರು ಮತ್ತು ಶಾಸಕರಾದ ಎಸ್.ಸುರೇಶ್ ಕುಮಾರ್ ಮಾತನಾಡಿ, ಅಮರ ಸುಳ್ಯದ ನೆನಪಿಗೋಸ್ಕರ ನಾವು ಇಂದು ಸೇರಿದ್ದೇವೆ. ಹಲವು ಜನ ರೈತಾಪಿ ಬಂಧುಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ನೆನಪನ್ನು ಸ್ಮರಿಸಬೇಕು, ಸುಳ್ಯವನ್ನು ಇಡೀ ಕರ್ನಾಟಕ ಗುರುತಿಸುವಂತೆ ಆಗಿದೆ.
ಹಿರಿಯರು ಮಾಡಿದ ತ್ಯಾಗ ಹೋರಾಟ ನೆನಪಿಸಿಕೊಂಡು ನಡೆಯಬೇಕು. ದೇಶ, ಸಮಾಜ ಕಟ್ಟುವ ಕಡೆ ನಡವಳಿಕೆ ಇರಬೇಕು ಎಂದು ಅವರು ಹೇಳಿದರು. ಕೆಪಿಎಸ್ನ ಪ್ರಾಂಶುಪಾಲರಾದ ಬಿ.ವಿ.ಸೂರ್ಯನಾರಾಯಣರವರು ಸಂಕಲ್ಪ ವಿಧಿ ಬೋಧಿಸಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಶೀಲ್ದಾರ್ ಅನಿತಾ ಲಕ್ಷ್ಮಿ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ ಎನ್.ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕೆಪಿಎಸ್ನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸುಳ್ಯ ಎನ್ಎಂಸಿ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಡಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ, ಸಿಡಿಪಿಒ ಶ್ರೀಮತಿ ರಶ್ಮಿ ಕೆ.ಎಂ ವಂದಿಸಿದರು.
ಸಭಾ ಕಾರ್ಯಕ್ರಮ ಮುಗಿದ ಬಳಿಕ ವಿದ್ಯಾರ್ಥಿಗಳಿಂದ ಮತ್ತು ಬಾಲಕೃಷ್ಣ ನೆಟ್ಟಾರುರವರಿಂದ ದೇಶಾಭಿಮಾನವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಮೊದಲಿಗೆ ಮೆರವಣಿಗೆಗೆ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಚಾಲನೆ ನೀಡಿದರು.
ನಂತರ ಬಸ್ಟೆಂಡಿನಿಂದ ಬಂಗ್ಲೆಗುಡ್ಡೆಯವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಸರ್ಕಾರಿ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು.
ಬೆಳ್ಳಾರೆಯ ಬಂಗ್ಲೆಗುಡ್ಡೆಗೆ ಮೆರವಣಿಗೆ ಸಾಗಿ ಬಂದ ಬಳಿಕ ಸುಳ್ಯದ ಅಮರ ಸ್ವಾತಂತ್ರ್ಯ ಹೋರಾಟ ಸಾರುವ ಬೀದಿ ನಾಟಕ ಪ್ರದರ್ಶಿಸಲಾಯಿತು. ಹೋರಾಟದ ಸ್ಮರಣ ಫಲಕವನ್ನು ಬಂಗ್ಲೆಗುಡ್ಡೆಯಲ್ಲಿ ಸಚಿವ ಎಸ್.ಅಂಗಾರರವರು ಅನಾವರಣಗೊಳಿಸಿದರು.
ಬೆಳ್ಳಾರೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ:ಅಮೃತ ಭಾರತಿಗೆ ಕನ್ನಡದ ಆರತಿ
Subscribe
Login
0 Comments