ಕುಂದಾಪುರ: ಜಾಗದ ತಕರಾರಿನ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳ ವಿರುದ್ಧ ದೂರು ಹಾಗೂ ಪ್ರತಿ ದೂರಿನ ಹಿನ್ನೆಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಗಂಗೊಳ್ಳಿ ಪೊಲೀಸರು ಬಿಜೆಪಿಯವರ ರಾಜಕೀಯ ಒತ್ತಡದಿಂದ ಕಾನೂನು ಬಾಹಿರವಾಗಿ ವರ್ತಿಸಿದ್ದಾರೆಂದು ಆರೋಪಿಸಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ನಿಯೋಗ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗುಜ್ಜಾಡಿ ಗ್ರಾಮದ ಕೊಡಪಾಡಿಯ ತನ್ನ ಮನೆಯಲ್ಲಿದ್ದಾಗ ಸೀತಾರಾಮ ಗಾಣಿಗ, ರಾಮಚಂದ್ರ ಗಾಣಿಗ ಹಾಗೂ ವಿಜಯ ಗಾಣಿಗ ಅವರು ತನಗೆ ಹಾಗೂ ಅತ್ತೆ ತುಂಗಾ ಅವರನ್ನು ದೂಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಜಾಹ್ನವಿ ಡಿ. ಗಾಣಿಗ ದೂರು ನೀಡಿದ್ದರು. ತಮ್ಮ ಮನೆಗೆ ಹೋಗುವ ದಾರಿಯಲ್ಲಿ ಇಟ್ಟಿದ್ದ ಕಲ್ಲನ್ನು ತೆಗೆಯುತ್ತಿರುವಾಗ ಅಲ್ಲಿಗೆ ಬಂದ ನಾಗಮ್ಮ(ತುಂಗ), ಭಾಸ್ಕರ, ವಿಜಯ, ದೇವಕಿ, ಜಾಹ್ನವಿ, ಹಾಗೂ ಇತರರು ಜೀವ ಬೆದರಿಕೆ ಹಾಕಿರುವುದಾಗಿ ಕೊಡಪಾಡಿಯ ತುಂಗ ಗಾಣಿಗ ಅವರು ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಒತ್ತಡದಿಂದಾಗಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯ ಸೀತಾರಾಮ ಗಾಣಿಗ ಅವರ ಮೇಲೆ ಸುಳ್ಳು ಗಂಭೀರ ಪ್ರಕರಣ ದಾಖಲಿಸಿ, ಬಂಧಿಸಿದಲ್ಲದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕೋಳ ಹಾಕುವ ತನಕ ಹೋಗಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಪ್ರಕರಣದ ಕುರಿತು ಮಾತನಾಡಲು ಬಂದ ಪ್ರಮುಖರ ಮೇಲೂ ಸಹ ವೈಯಕ್ತಿಕ ಹಿತಾಸಕ್ತಿಯಿಂದ ರೇಗಾಡಿದ್ದಾರೆಂದು ಆರೋಪಿಸಲಾಗಿದೆ. ಮಾತ್ರವಲ್ಲದೆ ಎದುರು ತಾವು ನೀಡಿದ ದೂರಿನ ಪ್ರಕರಣದ ಆರೋಪಿಗಳನ್ನು ರಾಜಕೀಯ ಒತ್ತಡದಿಂದ ಬಂಧಿಸದೇ ಗಂಗೊಳ್ಳಿ ಪೊಲೀಸರು ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸಿಕೊಡದಿದ್ದಲ್ಲಿ, ಠಾಣೆಯೆದುರೇ ಪ್ರತಿಭಟನೆ ನಡೆಸಲಾಗುವುದು ಎಂದು ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಮನವಿ ಆಲಿಸಿದ ಡಿವೈಎಸ್ಪಿ ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಗುಜ್ಜಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ, ಉಪಾಧ್ಯಕ್ಷ ರಾಜು ಎನ್. ಪೂಜಾರಿ, ಸದಸ್ಯರಾದ ಭಾರತಿ, ಲೋಲಾಕ್ಷಿ ಪಂಡಿತ್, ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ವಿಕಾಸ್ ಹೆಗ್ಡೆ, ಸದಾಶಿವ ಶೆಟ್ಟಿ, ಶೇಖರ್ ಬಳೆಗಾರ್, ರವಿ ಪೂಜಾರಿ, ಚಂದ್ರಶೇಖರ್ ಅರಾಟೆ, ಜಗನ್ನಾಥ್ ಬಿಲ್ಲವ, ಯೂತ್ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ, ಕಾಳಿಂಗ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಮಹಾಲಿಂಗ ಪೂಜಾರಿ ಮೊದಲಾದವರಿದ್ದರು.