Sunday, June 8, 2025

ಕಾರ್ಕಳದಲ್ಲಿ ಇನ್ನು ಕೇವಲ 15 ದಿನಕ್ಕಾಗುಷ್ಟು ನೀರು:ಮಳೆ‌ ಕೈ ಕೊಟ್ರೆ ಕಾರ್ಕಳ ಜನತೆಗೆ ಕಾಡಲಿದೆ‌ ನೀರಿನ ಸಮಸ್ಯೆ..!

ಕಾರ್ಕಳ : ಈ ಬಾರಿ ಬಿಸಿಲಿನ ತಾಪದ ಪರಿಣಾಮ ಹಾಗೂ ವರುಣನ ಮುನಿಸುವಿಕೆಯಿಂದ ಪುರಸಭೆ ವ್ಯಾಪ್ತಿಯಲ್ಲಿನ ಕೆಲ ನೀರಿನ ಮೂಲಗಳು ಭತ್ತಿ ಹೋಗಿದ್ದು ಇನ್ನು ಕೇವಲ 15 ದಿನಕಾಗುವಷ್ಟು ಮಾತ್ರ ಪುರಸಭೆ ನಿವಾಸಿಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ. ಎಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ತಿಳಿಸಿದ್ದಾರೆ.

ಕಳೆದ ವರ್ಷ ಬಿಸಿಲಿನ ಪ್ರಕರತೆ ತೀವ್ರ ವಾಗಿದ್ದರೂ ಹವಾಮಾನ ವೈಪರೀತ್ಯಗಳಿಂದಾಗಿ ವಾರಕ್ಕೆ ‌ಎರಡು ಮೂರು ಬಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ‌ ಪ್ರದೇಶಗಳಲ್ಲಿ ನೀರಿನ ಅಭಾವ ಕಾಡಿಲ್ಲ ಅನ್ನುವುದು ನಿಜ.ಅದ್ರೆ ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಈ ಬಾರಿ ಬಿಸಿಲಿನ ಕಾವು ವಿಪರೀತವಾಗಿದ್ದು ಅಂತರ್ಜಲ ಕುಸಿತವಾಗಿದೆ.

ನೀರಿನ ಪ್ರಮುಖ ಮೂಲ
ಕಾರ್ಕಳ ನಗರಕ್ಕೆ ‌ನೀರು ಪೊರೈಕೆ ಮಾಡುವಲ್ಲಿ ಮುಂಡ್ಲಿ ಹಾಗೂ ರಾಮಸಮುದ್ರ ಪ್ರಮುಖ ಎರಡು ಸರಬರಾಜು ಕೇಂದ್ರವಾಗಿದೆ. ಮುಂಡ್ಲಿ ಜಲಾಶಯದಲ್ಲಿ 125 ಎಚ್ ಪಿ (hp‌) ಸಾಮರ್ಥ್ಯದ 2 ಪಂಪ್ ಅಳವಡಿಕೆ ಮಾಡಲಾಗಿದ್ದು ,ರಾಮ ಸಮುದ್ರ ಪಂಪ್ ಹೌಸ್‌‌ ಕೆಳ ಭಾಗದಲ್ಲಿ 40hp ಸಾಮರ್ಥ್ಯ 2 ಪಂಪ್ ಹಾಗೂ‌ ಮೇಲ್ಬಾಗದಲ್ಲಿ ‌3 ಪಂಪ್ ಅಳವಡಿಕೆ ಮಾಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅದಲ್ಲದೆ ಪುರಸಭೆ ವ್ಯಾಪ್ತಿಯಲ್ಲಿ‌ 25 ಸರಕಾರಿ ಬಾವಿ, 24 ಬೋರ್‌ವೆಲ್ ಹಾಗೂ 2 ಖಾಸಗಿ ಮೂಲಗಳಿಂದ 23 ವಾಡ್೯ಗಳಿಗೆ ಸರಾಗವಾಗಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಪುರಸಭೆ ವತಿಯಿಂದ ಸಾರ್ವಜನಿಕರ ಬೇಡಿಕೆಯಂತೆ 4:35‌ಎಂಎಲ್‌ ಡಿ (mld)ಮೆಗಾ ಲೀಟರ್ ನೀರು ಪೂರೈಕೆಯಾಗಬೇಕಿದೆ‌

ಬೋರ್ ವೆಲ್ ವಿವರ:
ರಾಘವೇಂದ್ರ‌ಮಠ, ಕಾವೇರಡ್ಕ, ಅನೆಕರೆ, ಕುಂಟಲ್ಪಾಡಿ, ಜ್ಯೋತಿ ರಸ್ತೆ, ನಾಗೋಳಿ, ಜರಿಗುಡ್ಡೆ, ಕಲ್ಲೊಟ್ಟೆ, ನಿಸರ್ಗ ಹಿರಿಯಂಗಡಿ, ಚೇತನಾ, ಹಾಗೂ ನೂತನವಾಗಿ ಪತ್ತೊಂಜಿ ಕಟ್ಟೆ ,ಗುಂಡ್ಯ, ಪೊರ್ಲಾರ್, ಕುಂಬ್ರಿ ಪದವುಗಳಲ್ಲಿ ನಿರ್ಮಾಣ ಮಾಡಲಾಗಿದೆ.

ತರೆದ ಬಾವಿ ಹಾಗೂ ಪಂಪ್ ಅಳವಡಿಕೆಗೆ ವಿವರ :
ಅನೆಕೆರೆ, ಸಿಗಡಿಕೆರೆ,ಹಿರಿಯಾಂಗಡಿ, ಕಾಬೆಟ್ಟು ನೇತ್ರಾವತಿ,ತೆಳ್ಳಾರು ಇಂದುಗುರಿ ಗುಂಡ್ಯ, ಹವಾಲ್ದಾರ್ ಬೆಟ್ಟು, ಜರಿಗುಡ್ಡೆ, ಪತ್ತೊಂಜಿ ಕಟ್ಟೆ,‌ ಸಾಯಿಬಾಬ ನಗರ,‌

ತೆರದ ಬಾವಿಗಳ ವಿವರ:
ಪತ್ತೊಂಜಿ‌ಕಟ್ಟೆ‌, ಬಾಲಾಜಿ ಶಿಬಿರ,ಸಾಲ್ಮಾರ ಹವಾಲ್ದಾರ್ ಬೆಟ್ಟು ಬಂಡೀಮಠ, ಫಿಷರಿಸ್, ಚೋಲ್ಪಾಡಿ, ರಣವೀರ ಕಲೋನಿ ಮಾರ್ಕೆಟ್ ತಾಜ್ ಮಹಲ್ , ಬಂಗ್ಲಗುಡ್ಡೆ ಹಿಮ್ಮುಂಜೆ, ದಾನ ಶಾಲೆ ಅನಂತಶನ ಕುಂಬ್ರಿಪದವು.

ಮುಂಡ್ಲಿ ಜಲಾಶಯ
೧೯೯೪ರಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ದುರ್ಗ ಗ್ರಾ.ಪಂ. ವ್ಯಾಪ್ತಿಯ ಮುಂಡ್ಲಿ ಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು.
ಕೆಲ ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ನಿರ್ಮಾಣಗೊಂಡ ಜಲವಿದ್ಯುತ್ ಘಟಕದಿಂದಾಗಿ ಕಿರು ಅಣೆಕಟ್ಟಾಗಿ ಮಾರ್ಪಡಾಗಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ರಾಮಸಮುದ್ರ ಪಂಪ್ ಹೌಸ್‌ಗೆ ಹಾಯಿಸಿ ಅಲ್ಲಿ ಶುದ್ಧೀಕರಿಸಿ ಕಾರ್ಕಳದ ವಿವಿದೆಡೆಗಳಿಗೆ ಕುಡಿಯಲು ಈ ನೀರು ಪೂರೈಸಲಾಗುತ್ತಿದೆ.

ಉಡುಪಿಗೂ ಅಸರೆ
ಪಶ್ವಿಮ ಘಟ್ಟದ ತಪ್ಪಲು ತೀರಾ ಪ್ರದೇಶದಲ್ಲಿ ಹುಟ್ಟಿ ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ, ಕಲ್ಯಾಣಿ, ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆ ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ಹೆಸರಿನೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತಿದೆ.
ಈ ನಡುವೆ ತೆಳ್ಳಾರಿನ ಮುಂಡ್ಲಿಯಲ್ಲಿ ಕಿರುಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿ ಹಾಗೂ ಹಿರಿಯಡ್ಕ ಬಜೆಯಲ್ಲಿ ನಿರ್ಮಿಸಿರುವ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಪೂರೈಸಲಾಗುತ್ತಿದೆ.

ಗೋಮಟ್ಟಬೆಟ್ಟಕ್ಕೆ ಮತ್ತೊಂದು ಪಾರ್ಶ್ವದಲ್ಲಿ ಕಾಣಸಿಗುವಂತಹ ಈ ರಾಮ ಸಮುದ್ರದಲ್ಲಿ ಮಳೆಗಾಲದ ವೇಳೆಗೆ ಸಂಗ್ರಹವಾಗುವ ಮಳೆನೀರು ಯಾವುದೇ ಋತುವಿನಲ್ಲಿಯೂ ಬತ್ತಿಹೋಗದೇ ಇರುವುದರಿಂದ ಪುರಸಭೆಗೆ ಇದು ವರದಾನವಾಗಿದೆ.
ಕ್ರಿ.ಶ ೧೩೯೦ರಿಂದ ೧೪೨೦ರ ತನಕ ಕಾರ್ಕಳವನ್ನಾಳಿದ ವೀರಬೈರರಸನ ಇಬ್ಬರು ಮಕ್ಕಳಲ್ಲಿ ಒಬ್ಬನಾದ, ಸ್ವಾತಿಕ ಸ್ವಭಾವದ ರಾಮನಾಥ ತನ್ನ ತಂದೆಯ ಜೀವಿತಾವಧಿಯಲ್ಲಿಯೇ ವಿವಶನಾಗಿದ್ದನು. ಆತನ ಸ್ಮರಣಾರ್ಥವಾಗಿ ರಾಮಸಮುದ್ರನಿರ್ಮಿಸಲಾಗಿತ್ತು ಎಂಬ ಇತಿಹಾಸವಿದೆ.

ಗಮನಾರ್ಹವೆಂದರೆ ಮುಂಡ್ಲಿಯಲ್ಲಿ ನೀರು ಬತ್ತಿದಾಗ ಹಾಗೂ ಅನಿವಾರ್ಯ ದಿನಗಳಲ್ಲಿ ಇದೇ ರಾಮಸಮುದ್ರ ಕೆರೆಯ ನೀರನ್ನು ಶುದ್ಧೀಕರಣಗೊಳಿಸಿ ಕುಡಿಯುವ ನೀರನ್ನಾಗಿ ಪೊರೈಕೆ ಮಾಡಲಾಗುತ್ತದೆ.

ಈಗಾಗಲೇ ರಾಮಸಮುದ್ರದಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾದಲ್ಲಿ ಉತ್ತಮ ನೀರಿನ ಒರತೆ ಇರುವ ಖಾಸಗಿ ‌ಬಾವಿಯನ್ನು ಗುರುತಿಸಿ ಅದರಿಂದಲೂ ಸರಬರಾಜು ‌ಮಾಡುವ ಚಿಂತನೆಯನ್ನು ‌ನಡೆಸಲಾಗಿದೆ ಎಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ನ್ಯೂಸ್ ಪ್ಲಸ್ ಗೆ ತಿಳಿಸಿದ್ದಾರೆ.

ವರದಿ : ಸ್ಯಾಮ್ ನಾಯಕ್

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles