ತಿರುವನಂತಪುರ: ಏಳು ಜನರನ್ನು ಬಲಿ ಪಡೆದಿದ್ದ ಅಕ್ಕಿ ತಿನ್ನುವ 30 ವರ್ಷದ ಅರಿಕೊಂಬನ್ ಕಾಡಾನೆಯನ್ನು ಹುಲಿ ಸಂರಕ್ಷಣಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಪ್ರಾಣಿ ದಯಾ ಸಂಘಟನೆಗಳ ವಿರೋಧದ ಹೊರತಾಗಿಯೂ ‘ಅರಿಕೊಂಬನ್’ ಕಾಡಾನೆಯನ್ನು ಅರಿವಳಿಕೆ ಚುಚ್ಚುಮದ್ದು ಮೂಲಕ ಸೆರೆಹಿಡಿದು, ಟ್ರಕ್ಗೆ ಹಾಕಿ 80 ಕಿಮೀ ದೂರದ ಪೆರಿಯಾರ್ ಹುಲಿ ಸಂರಕ್ಷಣಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಇಡುಕ್ಕಿ ಜಿಲ್ಲೆಯ ಚಿನ್ನಕನಾಲ್ನಲ್ಲಿ ಅಕ್ಕಿ ಮಾರಾಟದ ಅಂಗಡಿಗಳಿಗೆ ನುಗ್ಗಿ ಜನರನ್ನು ಅಥವಾ ವ್ಯಾಪಾರಿಗಳನ್ನು ಕೊಂದು, ಬೇಕಾದಷ್ಟು ಅಕ್ಕಿ ಭಕ್ಷಿಸುತ್ತಿದ್ದ ಈ ಕಂಟಕಪ್ರಾಯ ಕಾಡಾನೆ ಊರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು.
ಕಳೆದ ಶನಿವಾರ ರಾತ್ರಿ ಒಂದು ಡಜನ್ ಪೊಲೀಸ್ ವಾಹನಗಳ ಕಾವಲಲ್ಲಿ ಪೆರಿಯಾರ್ನ ಹುಲಿ ಸಂರಕ್ಷಣಾಲಯಕ್ಕೆ ಅರಿಕೊಂಬನ್ನ್ನು ರವಾನಿಸಲಾಯಿತು.
ಅಕ್ಕಿಗಾಗಿ ಈ ಆನೆ ಬರೋಬ್ಬರಿ ಏಳು ಜನರನ್ನು ಬಲಿ ಪಡೆದಿದ್ದು, ಕಾಡಾನೆಗಳನ್ನು ನಿಯಂತ್ರಿಸುವ ತಜ್ಞ ಕೊನ್ನಿ ಸುರೇಂದ್ರನ್ ನೆರವಿನಿಂದ ನಿಯಂತ್ರಿಸಲಾಯಿತು.
ಅರಿಕೊಂಬನ್ಗೆ ರೇಡಿಯೊ ಕಾಲರ್ ಅಳವಡಿಸಿದ್ದ ಸರಕಾರ, ಆನೆಯ ಚಲನವಲನಗಳನ್ನು ಗಮನಿಸುತ್ತಿತ್ತು. ದಶಕಗಳಿಂದ ಇಡುಕ್ಕಿ ಜಿಲ್ಲೆಯ ದೇವಿಕುಳಂ ಅರಣ್ಯ ವಲಯದಲ್ಲಿ ಠಿಕಾಣಿ ಹೂಡಿತ್ತು ಈ ಸಲಗ.
ಮಾನವ-ವನ್ಯಜೀವಿಗಳ ಸಂಘರ್ಷದ ವಿಚಾರವಿದು, ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕೆಂಬುದು ಪ್ರಾಣಿ ದಯಾ ಸಂಘ ಆಗ್ರಹಿಸಿತ್ತು.
ಹಲವು ವರ್ಷಗಳ ಹಿಂದೆ ಅರಿಕೊಂಬನ್ಗೂ ವನವಾಸಿಗಳಿಗೂ ಸಂಘರ್ಷ ಶುರುವಾಯಿತು. ಈ ಸಮಸ್ಯೆ ಬಗೆಹರಿಸಲು ಅರಿಕೊಂಬನ್ನ್ನು ಸೆರೆಹಿಡಿದು ಕಾಯಂ ಬಂಧನದಲ್ಲಿಡಲು ಅರಣ್ಯ ಇಲಾಖೆ ಯೋಜಿಣಸಿತ್ತು. ಆದರೆ ಇದಕ್ಕೂ ತೊಡರುಗಾಲು ಹಾಕಿದ್ದ ಪ್ರಾಣಿ ಪ್ರೇಮಿಗಳು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು.
ಇದಕ್ಕಾಗಿ ಹೈಕೋರ್ಟ್ ಪಂಚಸದಸ್ಯ ಸಮಿತಿ ರಚಿಸಿತ್ತು. ತನಿಖೆ ನಡೆಸಿದ ಸಮಿತಿ ಆನೆಯನ್ನು ಮಾನವ-ವನ್ಯಪ್ರಾಣಿ ಸಂಘರ್ಷ ಮುಕ್ತ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಶಿಫಾರಸು ಮಾಡಿತ್ತು.
ಅರಿಕೊಂಬನ್ ಸೆರೆಗೆ ಸರಕಾರ 150 ಅಧಿಕಾರಿಗಳ ಕಾರ್ಯಪಡೆ ರಚಿಸಿತ್ತು. ಪೆರಿಯಾರ್ನಲ್ಲಿ ಮುಂಜಾಗೃತಾ ಕ್ರಮವಾಗಿ ಕರ್ಫ್ಯೂ ವಿಧಿಸಲಾಗಿತ್ತು. ಆದರೆ ಸ್ಥಳೀಯರು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಬದಲಿಗೆ, ಅರಿಕೊಂಬನ್ನನ್ನು ಹರ್ಷಚಿತ್ತದಿಂದ ಸ್ವಾಗತಿಸಿದ್ದಾರೆ.