ಉಡುಪಿ: ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ನ ಗೌರವಾಧ್ಯಕ್ಷರಾದ ದಿ| ಓಸ್ಕರ್ ಫೆರ್ನಾಂಡಿಸ್ ಮತ್ತು ದಿ| ಮಂಜುನಾಥ ಉದ್ಯಾವರ ಅವರ ನೆನಪಿನ “ಓಸ್ಕರಣ್ಣ-ಮಂಜಣ್ಣ ನೇತ್ರದಾನ ವಾಗ್ದಾನ ಕಾರ್ಯಕ್ರಮ” ವು ಡಿಸೆಂಬರ್ 26 ರಂದು ಸಂಸ್ಥೆಯ ಕಾರ್ಯಾಲಯದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ೧೪ ರಿಂದ ೭೬ ವರ್ಷದ ವರೆಗಿನ ೯೦ ಮಂದಿ ನೇತ್ರದಾನ ವಾಗ್ದಾನವನ್ನು ಮಾಡಿದರು.
“ಓಸ್ಕರಣ್ಣ-ಮಂಜಣ್ಣ ನೇತ್ರದಾನ ವಾಗ್ದಾನ ಕಾರ್ಯಕ್ರಮ”ದಲ್ಲಿ ಭಾಗವಹಿಸಿ ನೇತ್ರದಾನ ವಾಗ್ದಾನ ಮಾಡಿದ ಅತ್ಯಂತ ಕಿರಿಯ 9ನೇ ತರಗತಿಯ ಮಾ| ಸಮರ್ಥ್ ಚಂದ್ರಶೇಖರ್ ಅವರಿಗೆ ಉಡುಪಿ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ| ಕೃಷ್ಣಪ್ರಸಾದ್ ಕೂಡ್ಲುರವರು ದೃಢ ಪತ್ರವನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಇತ್ತರು. ಒಬ್ಬ ವ್ಯಕ್ತಿಯ ಆರೋಗ್ಯವಂತ ನೇತ್ರದಿಂದ ನಾಲ್ಕು ಜನರಿಗೆ ದೃಷ್ಟಿಯನ್ನು ನೀಡಬಹುದಾಗಿದೆ. ಹಾಗಾಗಿ ನೇತ್ರದಾನದ ಬಗ್ಗೆ ನಾವು ಜಾಗೃತಿಯನ್ನು ಮೂಡಿಸಬೇಕು. ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮರಣಾನಂತರ ೬ ಗಂಟೆಗಳ ಒಳಗೆ ನೇತ್ರವನ್ನು ಸಂಗ್ರಹಿಸಿ ೭೨ ಗಂಟೆಗಳ ಕಾಲ ಅದನ್ನು ಸಂರಕ್ಷಿಸಬಹುದಾಗಿದೆ. ಸೇವಾ ಸಂಸ್ಥೆಗಳ ಈ ರೀತಿಯ ಕಾರ್ಯಕ್ರಮಗಳಿಂದ ನೇತ್ರದಾನ ವಾಗ್ದಾನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ತಮ್ಮ ಪ್ರೀತಿ ಪಾತ್ರರ ಹೆಸರಲ್ಲಿ ನೇತ್ರದಾನ ವಾಗ್ದಾನ ಮಾಡುವುದಂರಿಂದ ಬದುಕಿಗೆ ಸಾರ್ಥಕ ಭಾವವನ್ನು ಕೊಡುತ್ತದೆ. ಈ ಸಂಸ್ಥೆ ಶಿಫಾರಸು ಮಾಡಿದ ಅರ್ಹ ಬಡ ನೇತ್ರರೋಗಿಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಯನ್ನು ಉಚಿತವಾಗಿ ಮಾಡುತ್ತೇನೆ. ಈ ಸಂಸ್ಥೆ ಇನ್ನು ಮುಂದಕ್ಕೂ ಜನಪರ ಕೆಲಸ ಕಾರ್ಯಕ್ರಮಗಳನ್ನು ಮುಂದುವರಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ, ಈ ಸಂಸ್ಥೆ ಇಷ್ಟು ದೀರ್ಘವಾಗಿ ಬಾಳಿ ಬದುಕ ಬೇಕಾದರೆ ಅದಕ್ಕೆ ಶಕ್ತಿಯನ್ನು ಕೊಡುವುದು ಇಂತಹ ಜನಪರ ಕೆಲಸಗಳು. ಓಸ್ಕರಣ್ಣ ಮತ್ತು ಮಂಜಣ್ಣ ಇಬ್ಬರೂ ನನ್ನ ಆತ್ಮೀಯರು. ಅವರ ನೆನಪಿನಲ್ಲಿ ಜರಗುವ ಈ ಕಾರ್ಯಕ್ರಮ ನಿಜವಾಗಿಯೂ ಒಂದು ಅರ್ಥಪೂರ್ಣವಾಗಿದೆ. ಉದ್ಯಾವರ ಗ್ರಾಮದ ಅಭಿವೃದ್ಧಿಗೆ ಅವರಿಬ್ಬರ ಕೊಡುಗೆ ಅಪಾರ. ಅವರನ್ನು ಈ ರೀತಿ ನೆನಪು ಮಾಡಿಕೊಳ್ಳುತ್ತಿರುವುದು ಖುಷಿಯ ವಿಚಾರ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಸಿದ್ದ ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ರವರು ಮಾತನಾಡಿ, ಓಸ್ಕರಣ್ಣ ಮತ್ತು ಮಂಜಣ್ಣರಿಗೆ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಇದೆ. ಈ ನೇತ್ರದಾನ ವಾಗ್ದಾನ, ರಕ್ತದಾನ ಅಂಗಾಂಗ ದಾನ, ದೇಹ ದಾನ ಗಳ ಬಗ್ಗೆ ಇದ್ದಂತ ತಪ್ಪು ಗ್ರಹಿಕೆಗಳು ನಿಧಾನವಾಗಿ ಬದಲಾಗುತ್ತಿವೆ. ನಾವು ಸತ್ತ ಮೇಲೂ ಬದುಕುವುದು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಾಗ. ಈ ಕಾರ್ಯಕ್ರಮ ಅದಕ್ಕೆ ಪೂರಕವಾಗಲಿದೆ. ಸಂಸ್ಥೆ ಇಷ್ಟು ವರ್ಷ ಬದುಕಿದೆ ಎಂದರೆ ಸಂಸ್ಥೆ ಮಾಡಿಕೊಂಡು ಬಂದಿರುವಂತಹ ಜನಪರ ಕೆಲಸಗಳಿಂದ. ಇನ್ನು ಮುಂದಕ್ಕೂ ಇಂತಹ ಕೆಲಸಗಳು ಮುಂದುವರೆಯುತ್ತದೆ ಎಂದರು.
ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ರಿಯಾಝ್ ಪಳ್ಳಿ ಸ್ವಾಗತಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತಿಲಕ್ರಾಜ್ ಸಾಲ್ಯಾನ್ ಅವರು ವಂದಿಸಿದರು. ಮಾಜಿ ಅಧ್ಯಕ್ಷರಾದ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.