Saturday, June 7, 2025

ನೇತ್ರದಾನದ ಕುರಿತು ತಪ್ಪು ಗ್ರಹಿಕೆ ಬೇಡ : ಡಾ| ಕೃಷ್ಣಪ್ರಸಾದ್ ಕೂಡ್ಲು


ಉಡುಪಿ: ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಗೌರವಾಧ್ಯಕ್ಷರಾದ ದಿ| ಓಸ್ಕರ್ ಫೆರ್ನಾಂಡಿಸ್ ಮತ್ತು ದಿ| ಮಂಜುನಾಥ ಉದ್ಯಾವರ ಅವರ ನೆನಪಿನ “ಓಸ್ಕರಣ್ಣ-ಮಂಜಣ್ಣ ನೇತ್ರದಾನ ವಾಗ್ದಾನ ಕಾರ್ಯಕ್ರಮ” ವು ಡಿಸೆಂಬರ್ 26 ರಂದು ಸಂಸ್ಥೆಯ ಕಾರ್ಯಾಲಯದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ೧೪ ರಿಂದ ೭೬ ವರ್ಷದ ವರೆಗಿನ ೯೦ ಮಂದಿ ನೇತ್ರದಾನ ವಾಗ್ದಾನವನ್ನು ಮಾಡಿದರು.

“ಓಸ್ಕರಣ್ಣ-ಮಂಜಣ್ಣ ನೇತ್ರದಾನ ವಾಗ್ದಾನ ಕಾರ್ಯಕ್ರಮ”ದಲ್ಲಿ ಭಾಗವಹಿಸಿ ನೇತ್ರದಾನ ವಾಗ್ದಾನ ಮಾಡಿದ ಅತ್ಯಂತ ಕಿರಿಯ 9ನೇ ತರಗತಿಯ ಮಾ| ಸಮರ್ಥ್ ಚಂದ್ರಶೇಖರ್ ಅವರಿಗೆ ಉಡುಪಿ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ| ಕೃಷ್ಣಪ್ರಸಾದ್ ಕೂಡ್ಲುರವರು ದೃಢ ಪತ್ರವನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಇತ್ತರು. ಒಬ್ಬ ವ್ಯಕ್ತಿಯ ಆರೋಗ್ಯವಂತ ನೇತ್ರದಿಂದ ನಾಲ್ಕು ಜನರಿಗೆ ದೃಷ್ಟಿಯನ್ನು ನೀಡಬಹುದಾಗಿದೆ. ಹಾಗಾಗಿ ನೇತ್ರದಾನದ ಬಗ್ಗೆ ನಾವು ಜಾಗೃತಿಯನ್ನು ಮೂಡಿಸಬೇಕು. ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮರಣಾನಂತರ ೬ ಗಂಟೆಗಳ ಒಳಗೆ ನೇತ್ರವನ್ನು ಸಂಗ್ರಹಿಸಿ ೭೨ ಗಂಟೆಗಳ ಕಾಲ ಅದನ್ನು ಸಂರಕ್ಷಿಸಬಹುದಾಗಿದೆ. ಸೇವಾ ಸಂಸ್ಥೆಗಳ ಈ ರೀತಿಯ ಕಾರ್ಯಕ್ರಮಗಳಿಂದ ನೇತ್ರದಾನ ವಾಗ್ದಾನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ತಮ್ಮ ಪ್ರೀತಿ ಪಾತ್ರರ ಹೆಸರಲ್ಲಿ ನೇತ್ರದಾನ ವಾಗ್ದಾನ ಮಾಡುವುದಂರಿಂದ ಬದುಕಿಗೆ ಸಾರ್ಥಕ ಭಾವವನ್ನು ಕೊಡುತ್ತದೆ. ಈ ಸಂಸ್ಥೆ ಶಿಫಾರಸು ಮಾಡಿದ ಅರ್ಹ ಬಡ ನೇತ್ರರೋಗಿಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಯನ್ನು ಉಚಿತವಾಗಿ ಮಾಡುತ್ತೇನೆ. ಈ ಸಂಸ್ಥೆ ಇನ್ನು ಮುಂದಕ್ಕೂ ಜನಪರ ಕೆಲಸ ಕಾರ್ಯಕ್ರಮಗಳನ್ನು ಮುಂದುವರಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ, ಈ ಸಂಸ್ಥೆ ಇಷ್ಟು ದೀರ್ಘವಾಗಿ ಬಾಳಿ ಬದುಕ ಬೇಕಾದರೆ ಅದಕ್ಕೆ ಶಕ್ತಿಯನ್ನು ಕೊಡುವುದು ಇಂತಹ ಜನಪರ ಕೆಲಸಗಳು. ಓಸ್ಕರಣ್ಣ ಮತ್ತು ಮಂಜಣ್ಣ ಇಬ್ಬರೂ ನನ್ನ ಆತ್ಮೀಯರು. ಅವರ ನೆನಪಿನಲ್ಲಿ ಜರಗುವ ಈ ಕಾರ್ಯಕ್ರಮ ನಿಜವಾಗಿಯೂ ಒಂದು ಅರ್ಥಪೂರ್ಣವಾಗಿದೆ. ಉದ್ಯಾವರ ಗ್ರಾಮದ ಅಭಿವೃದ್ಧಿಗೆ ಅವರಿಬ್ಬರ ಕೊಡುಗೆ ಅಪಾರ. ಅವರನ್ನು ಈ ರೀತಿ ನೆನಪು ಮಾಡಿಕೊಳ್ಳುತ್ತಿರುವುದು ಖುಷಿಯ ವಿಚಾರ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಸಿದ್ದ ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್‌ರವರು ಮಾತನಾಡಿ, ಓಸ್ಕರಣ್ಣ ಮತ್ತು ಮಂಜಣ್ಣರಿಗೆ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಇದೆ. ಈ ನೇತ್ರದಾನ ವಾಗ್ದಾನ, ರಕ್ತದಾನ ಅಂಗಾಂಗ ದಾನ, ದೇಹ ದಾನ ಗಳ ಬಗ್ಗೆ ಇದ್ದಂತ ತಪ್ಪು ಗ್ರಹಿಕೆಗಳು ನಿಧಾನವಾಗಿ ಬದಲಾಗುತ್ತಿವೆ. ನಾವು ಸತ್ತ ಮೇಲೂ ಬದುಕುವುದು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಾಗ. ಈ ಕಾರ್ಯಕ್ರಮ ಅದಕ್ಕೆ ಪೂರಕವಾಗಲಿದೆ. ಸಂಸ್ಥೆ ಇಷ್ಟು ವರ್ಷ ಬದುಕಿದೆ ಎಂದರೆ ಸಂಸ್ಥೆ ಮಾಡಿಕೊಂಡು ಬಂದಿರುವಂತಹ ಜನಪರ ಕೆಲಸಗಳಿಂದ. ಇನ್ನು ಮುಂದಕ್ಕೂ ಇಂತಹ ಕೆಲಸಗಳು ಮುಂದುವರೆಯುತ್ತದೆ ಎಂದರು.

ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ರಿಯಾಝ್ ಪಳ್ಳಿ ಸ್ವಾಗತಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತಿಲಕ್‌ರಾಜ್ ಸಾಲ್ಯಾನ್ ಅವರು ವಂದಿಸಿದರು. ಮಾಜಿ ಅಧ್ಯಕ್ಷರಾದ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles