ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಸೌಲಭ್ಯ ಒದಗಿಸುವ ಸಲುವಾಗಿ ಸಂಚಾರಿ ಕ್ಲಿನಿಕ್ ಅನ್ನು ಕಾರ್ಮಿಕ ಇಲಾಖೆಯು ಪ್ರಾರಂಭ ಮಾಡುತ್ತಿದೆ.
‘ಶ್ರಮಿಕ ಸಂಜೀವಿನಿ’ ಎಂಬ ಈ ಯೋಜನೆಯನ್ನು ಜಾರಿಗೆ ತರಲು ಅಂತಿಮ ಹಂತದ ಸಿದ್ಧತೆ ನಡೆಸಲಾಗುತ್ತಿದೆ.
ಮೊದಲಿಗೆ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸಂಚಾರಿ ಕ್ಲಿನಿಕ್ ಆರಂಭ ಮಾಡಲಾಗುತ್ತಿದೆ. ಸರ್ಕಾರದ ಬಹು ಮಹತ್ವಕಾಂಕ್ಷಿ ಯೋಜನೆ ಆಗಿರುವ ‘ಶ್ರಮಿಕ ಸಂಜೀವಿನಿ’, ಕಾರ್ಮಿಕರು ಇರುವಲ್ಲಿಯೇ ಉಚಿತವಾಗಿ ಆರೋಗ್ಯ ಸೇವೆಗಳನ್ನು ಅವರಿಗೆ ನೀಡುವ ವ್ಯವಸ್ಥೆ ಇದಾಗಿದೆ.
ಈ ಸೌಲಭ್ಯ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಸಿಗಲಿದೆ. ಪ್ರಥಮ ಚಿಕಿತ್ಸೆ, ಪ್ರಯೋಗಾಲಯ ಪರೀಕ್ಷೆಗಳು, ಕೋವಿಡ್ ಪರೀಕ್ಷೆ, ಪ್ರಸವ ಪೂರ್ವ ಮತ್ತು ನಂತರದ ಸೇವೆಗಳು, ಚುಚ್ಚುಮದ್ದು ಸೇವೆಗಳು ಸೇರಿದಂತೆ ಇತ್ಯಾದಿ ಆರೋಗ್ಯ ಸೇವೆಗಳನ್ನು ಸಂಚಾರಿ ಕ್ಲಿನಿಕ್ ಗಳಲ್ಲಿ ಸ್ಥಳದಲ್ಲಿಯೇ ಉಚಿತವಾಗಿ ನೀಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.