ಕುಂದಾಪುರ: ಮಾರ್ಬಲ್ ಲಾರಿಯಿಂದ ಇಳಿಸುವ ವೇಳೆ ನಡೆದ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡ ಘಟನೆ ಕುಂದಾಪುರದ ತ್ರಾಸಿ ಸಮೀಪದ ಕಂಚುಗೋಡು ಬೀಚ್ ಬಳಿ ಗುರುವಾರ ಸಂಜೆ ನಡೆದಿದೆ.
ಪಶ್ಚಿಮ ಬಂಗಾಲ ಮೂಲದ ಗಣಪತಿ ಮೃತ ವ್ಯಕ್ತಿ ಎನ್ನಲಾಗಿದೆ. ಇನ್ನಿಬ್ಬರು ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಚುಗೋಡು ಬೀಚ್ ಸಮೀಪ ನಿರ್ಮಾಣವಾಗುತ್ತಿದ್ದ ಖಾಸಗಿ ರೆಸಾರ್ಟ್ವೊಂದರ ಕಾಮಗಾರಿ ಸಲುವಾಗಿ ಪಶ್ಚಿಮ ಬಂಗಾಲದಿಂದ ಲಾರಿಯಲ್ಲಿ ಮಾರ್ಬಲ್ಗಳನ್ನು ಬುಧವಾರ ತರಿಸಲಾಗಿದೆ. ಬೃಹತ್ ಸರಕು ಆಗಿರುವುದರಿಂದ ಬುಧವಾರದಿಂದಲೇ 5-6 ಮಂದಿಯ ತಂಡವು ಲಾರಿಯಿಂದ ಮಾರ್ಬಲ್ಗಳನ್ನು ಇಳಿಸುತ್ತಿದ್ದರು. ಗುರುವಾರ ಸಂಜೆ ವೇಳೆಗೆ ಅರ್ಧದಷ್ಟು ಇಳಿಸಿ ಆಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಬೃಹತ್ ಮಾರ್ಬಲ್ ಇಳಿಸುತ್ತಿರುವ ವೇಳೆ ಮೂವರ ಮೇಲೆ ಮಾರ್ಬಲ್ ಬಿದ್ದಿದೆ ಎನ್ನಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.