ಮಂಗಳೂರು: ಉಕ್ರೇನ್ನಿಂದ ಮಂಗಳೂರು ಮೂಲದ ಮೊದಲ ವಿದ್ಯಾರ್ಥಿನಿ ಅನುಷಾ ಭಟ್ ಗುರುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಮಂಗಳೂರಿನ ಬಿಜೈ ನ್ಯೂ ರೋಡ್ ನಿವಾಸಿ ಅನುಷಾ ಭಟ್, ಉಕ್ರೇನ್ನ ವಿನ್ನೆಸ್ಟ್ಯಿಯಾ ನಗರದ ನ್ಯಾಷನಲ್ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದರು. ಯುದ್ದಗ್ರಸ್ಥ ಪ್ರದೇಶದಿಂದ 200 ಕಿ.ಮೀ ದೂರದಲ್ಲಿದ್ದ ಅವರು ರೊಮೇನಿಯಾದಿಂದ ಮುಂಬೈಗೆ ಆಗಮಿಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ್ದಾರೆ.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅನುಷಾ ಭಟ್, ಫೆ.26ರಂದು ನಾನು ಮತ್ತು ನನ್ನ ಸ್ನೇಹಿತರು ವಿನ್ನೆಸ್ಟ್ಯಿಯಾದಿಂದ ಬಸ್ನಲ್ಲಿ ಹೋಗಿ ಆ ಬಳಿಕ 2ಕಿ.ಮೀ ನಡೆದು ಗಡಿ ತಲುಪಿದೆವು. ನಮಗೆ ಏರ್ ಲಿಫ್ಟ್ ವೇಳೆ ಯಾವುದೇ ತೊಂದರೆ ಆಗಿಲ್ಲ. ನಾನಿದ್ದ ಜಾಗದಲ್ಲಿ ಯಾವುದೇ ಯುದ್ಧದ ಪರಿಸ್ಥಿತಿ ಇರಲಿಲ್ಲ. ಹಾಗಾಗಿ ಅಲ್ಲೇ ಇದ್ದೆವು. ನಾವು ನಿತ್ಯ ಮನೆಯವರ ಜೊತೆ ಸಂಪರ್ಕ ಇದ್ದುದರಿಂದ ಏನೂ ಸಮಸ್ಯೆ ಆಗಿಲ್ಲ. ಭಾರತ ಸರ್ಕಾರ ರೊಮೇನಿಯಾದಿಂದ ಭಾರತಕ್ಕೆ ಬರೋ ತನಕ ಸಹಾಯ ಮಾಡಿದ್ದಾರೆ ಎಂದರು.